ತಾಲೂಕಿನ ಸಂಕೇಶ್ವರದ ಶಂಕರಲಿಂಗ ಜಾಕವೆಲ್ನಿಂದ ಕೆರೆಗಳಿಗೆ ನೀರು ತುಂಬಿಸುವ ಯೋಜನಾ ಘಟಕದ ಪೂಜಾ ಸಮಾರಂಭದಲ್ಲಿ ಶಾಸಕ ನಿಖಿಲ ಕತ್ತಿ ಮಾತನಾಡಿದರು. ಗಜಾನನ ಕೊಳ್ಳಿ, ಅಮರ ನಲವಡೆ, ಸುನೀಲ ಪರ್ವತರಾವ, ಬಂಡು ಹತನೂರೆ, ಸಂಜಯ ಶಿರಕೋಳಿ ಇತರರಿದ್ದರು.
ಹುಕ್ಕೇರಿ: ಹುಕ್ಕೇರಿ ಮತಕ್ಷೇತ್ರದ ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ನಿರ್ಮಿಸಿದ ಕೆರೆ ಕಟ್ಟೆಗಳಿಗೆ ಮಳೆಗಾಲದಲ್ಲಿ ಹಿರಣ್ಯಕೇಶಿ ನದಿಯಿಂದ ನೀರು ತುಂಬಿಸುವ ಕಾರ್ಯ ಮಾಡುತ್ತಿರುವುದರಿಂದ ಇತ್ತೀಚಿನ ವರ್ಷಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಳವಾಗಿದೆ ಎಂದು ಶಾಸಕ ನಿಖಿಲ ಕತ್ತಿ ಹೇಳಿದರು.
ಸೋಮವಾರದಂದು ತಾಲೂಕಿನ ಸಂಕೇಶ್ವರದ ಶಂಕರಲಿಂಗ ದೇವಸ್ಥಾನ ಸಮೀಪದ ಜಾಕವೆಲ್ನಿಂದ ಕೆರೆಗಳಿಗೆ ನೀರು ತುಂಬಿಸುವ ಯೋಜನಾ ಘಟಕದ ಪಂಪಸೆಟ್ಗಳನ್ನು ಪ್ರಾರಂಭಿಸುವ ಪೂಜಾ ಸಮಾರಂಭದಲ್ಲಿ ಮಾತನಾಡಿದರು. ನಮ್ಮ ತಂದೆ ದಿ.ಉಮೇಶ ಕತ್ತಿ ಅವರು ಕೋಟ್ಯಾಂತರ ರೂ ವೆಚ್ಚದಲ್ಲಿ ಕೆರೆ ತುಂಬಿಸುವ ಯೋಜನೆ ಪ್ರಾರಂಭಿಸಿದರು. ಇದೀಗ ಅವರು ಕಂಡ ಕನಸು ನನಸಾಗಿದೆ ಎಂದರು.

ಬೇಸಿಗೆ ಸಮಯದಲ್ಲಿ ಹಿರಣ್ಯಕೇಶಿ ನದಿ ಬತ್ತುವುದರಿಂದ ಕೆರೆಗಳಿಗೆ ನೀರು ತುಂಬಿಸಲು ಆಗುತ್ತಿರಲಿಲ್ಲ. ಇದೀಗ ಹಿರಣ್ಯಕೇಶಿ ನದಿಯ ಬ್ಯಾರೇಜುಗಳನ್ನು ಬೇಸಿಗೆಯಲ್ಲಿ ತುಂಬಿಸುವ ಪೈಪಲೈನ್ ಯೋಜನೆ ಪ್ರಗತಿಯಲ್ಲಿದ್ದು ಅದು ಮುಗಿದ ಬಳಿಕ ಬೇಸಿಗೆಯಲ್ಲೂ ಕೆರೆ ಕಟ್ಟೆಗಳಿಗೆ ನಿರಂತರ ನೀರು ಹರಿಸುವ ಕಾಯಕ ಆಗಲಿದೆ ಎಂದರು. ಈ ಯೋಜನೆಯಿಂದ ತಾಲೂಕಿನ ಶೇ.70 ರಷ್ಟು ಕ್ಷೇತ್ರ ನೀರಾವರಿಯಾಗಿದೆ. ಇದರ ಜತೆಗೆ ರಾಯಬಾಗ, ಚಿಕ್ಕೋಡಿ ತಾಲೂಕಿನ 11 ಕೆರೆಗಳು ಹಾಗೂ ಹುಕ್ಕೇರಿ ತಾಲೂಕಿನ 22 ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ ಎಂದು ತಿಳಿಸಿದರು.

ಸಂಕೇಶ್ವರ ಮುಖಂಡರಾದ ಗಜಾನನ ಕೊಳ್ಳಿ, ಅಮರ ನಲವಡೆ, ಸುನೀಲ ಪರ್ವತರಾವ, ಅಜಿತ ಕರಜಗಿ, ಬಂಡು ಹತನೂರೆ, ಸಂಜಯ ಶಿರಕೋಳಿ, ಸಚಿನ್ ಭೋಪಳೆ, ಸುನೀಲ ಶೇಲಾರ, ಸಂಜಯ ಕೋಕಿತ್ಕರ, ಸಂದೀಪ ಪಾಟೀಲ, ಚಂದ್ರು ಪಾಟೀಲ, ವಿಜಯ ಶೇರೆಕರ, ಗಂಗಾರಾಮ ಭೂಸಗೋಳ, ಅಶೋಕ ಹಿರೇಕೋಡಿ ಚೇತನ ಬಸೆಟ್ಟಿ, ನಂದು ಮುಡಸಿ ಹಾಗೂ ಕಲಗೌಡ ಪಾಟೀಲ, ಗುರುರಾಜ ಕುಲಕರ್ಣಿ, ಸುನೀಲ ನೇರಲಿ, ಶೀತಲ ಬ್ಯಾಳಿ, ರಾಜು ಮುನ್ನೋಳಿ ಅಧಿಕಾರಿಗಳಾದ ಎಸ್.ಎಸ್.ಕರಿಗಾರ, ಚಂದ್ರಶೇಖರ ಚೌಗಲಾ, ಎ.ಎಸ್.ಪೂಜಾರ ಮತ್ತಿತರರಿದ್ದರು.





