ತಾಲೂಕಿನ ರಕ್ಷಿ ಗ್ರಾಮದ ಗುಡ್ ಶೆಪರ್ಡ ಆಂಗ್ಲ ಮಾಧ್ಯಮ ಶಾಲಾ ವಾರ್ಷಿಕೋತ್ಸವದಲ್ಲಿ ನ್ಯಾಯಾಧೀಶ ಆದಿತ್ಯ ಕಲಾಲ ಅವರನ್ನು ಸನ್ಮಾನಿಸಿದರು.ಡಾ.ಸದಾನಂದ ಕುರಿ, ಕೆ.ಬಿ.ಕುರಬೇಟ, ಎಸ್.ನದಾಫ, ಬಿ.ಆಯ್.ಅಲಗೂರಿ, ಜಿನೇಂದ್ರ ನಿಲಜಗಿ ಇತರರಿದ್ದರು.
ಹುಕ್ಕೇರಿ : ಭಾಷೆ ಕಲಿಕಾ ವ್ಯವಹಾರಿಕತೆಗೆ ಸಹಕಾರಿ ಆದರೆ ವಿದ್ಯೆ ಬದುಕಿನ ಬಂಡೆಗೆ ಆಸರೆ ಆಗುತ್ತದೆ. ನಿಷ್ಠೆ, ಶೃದ್ಧೆಯಿಂದ ವಿದ್ಯಾಭ್ಯಾಸ ಮಾಡಿ ಕಲಿತ ಶಾಲೆಗೂ, ಪಾಲಕರಿಗೂ ಹೆಸರು ತರಬೇಕೆಂದು ಪ್ರಧಾನ ದಿವಾಣಿ ನ್ಯಾಯಾಧೀಶ ಆದಿತ್ಯ ಕಲಾಲ ಹೇಳಿದರು.
ಇತ್ತೀಚೆಗೆ ನಡೆದ ತಾಲೂಕಿನ ರಕ್ಷಿ ಗ್ರಾಮದ ಗುಡ್ ಶೆಪರ್ಡ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು. ಇತ್ತೀಚಿನ ವರ್ಷಗಳಲ್ಲಿ ಗ್ರಾಮೀಣ ಪ್ರದೇಶದಲ್ಲೂ ಗುಣಮಟ್ಟದ ಶಿಕ್ಷಣ ನೀಡಲು ಹಲವಾರು ವಿದ್ಯಾ ಸಂಸ್ಥೆಗಳು ಪೈಪೋಟಿಗೆ ಇಳಿದಿವೆ. ಗುಣಮಟ್ಟದ ಜತೆಗೆ ಸಂಸ್ಕಾರ, ಒಳ್ಳೆಯ ಆಚಾರಗಳನ್ನು ಮಕ್ಕಳಿಗೆ ಶಿಕ್ಷಕರು ಬೋಧಿಸಬೇಕು. ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಗಳನ್ನು ಬೆಳಕಿಗೆ ತರಲು ವಾರ್ಷಿಕೋತ್ಸವ ಮಹತ್ವ ವಹಿಸುತ್ತದೆ ಎಂದರು.
ವಕೀಲರ ಸಂಘದ ಅಧ್ಯಕ್ಷ ಕೆ.ಬಿ.ಕುರಬೇಟ, ಪ್ರಧಾನ ಕಾರ್ಯದರ್ಶಿ ಎಸ್.ಜಿ.ನದಾಫ ಅವರು ಮಾತನಾಡಿ ಗುಡ್ ಶೆಪರ್ಡ ಶಾಲೆ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಯಶಸ್ವಿಯಾಗಿದೆ. ಪಾಲಕರು ಸಾಯಂಕಾಲ ಮೂರು ತಾಸು ಟಿ.ವ್ಹಿ ಮತ್ತು ಮೋಬೈಲ್ ಬಳಕೆ ನಿಲ್ಲಿಸಿ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಬೇಕು ಎಂದರು.
ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು ಮಾತನಾಡಿ ಉನ್ನತ ಗುಣಮಟ್ಟದ ಶಾಲೆಗಳಿಗೆ ಮಕ್ಕಳ ಪ್ರವೇಶಾತಿ ಕೊಡಿಸುವುದರ ಜತೆಗೆ ಪಾಲಕರು ಪ್ರತಿನಿತ್ಯ ಎರಡು ತಾಸುಗಳಾದರು ಕಲಿಕೆಗೆ ಸಹಕರಿಸಬೇಕು. ಅಂದರೆ ಅವರೊಂದಿಗೆ ಸಮಯ ಕಳೆಯಬೇಕು. ಆಗ ಮಾತ್ರ ಪಾಲಕರ ಶ್ರಮ ಸಾರ್ಥಕವಾಗುತ್ತದೆ ಎಂದು ಹೇಳಿದರು. ಸಂಸ್ಥೆಯ ಪ್ರಾಚಾರ್ಯ ಡಾ.ಸದಾನಂದ ಕುರಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅತಿಥಿಗಳನ್ನು ಸನ್ಮಾನಿಸಿದರು. ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಪ್ರಾರಂಭದಲ್ಲಿ ಮಕ್ಕಳು ರಚಿಸಿದ ಕಲಾಕೃತಿಗಳನ್ನು ಅತಿಥಿಗಳು ವೀಕ್ಷಿಸಿದರು.

ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಜಿನೇಂದ್ರ ನಿಲಜಗಿ, ತಾಲೂಕಾ ದೈಹಿಕ ಶಿಕ್ಷಣಾಧಿಕಾರಿ ಎ.ಆಯ್.ಕೋಟಿವಾಲೆ, ವ್ಯವಸ್ಥಾಪಕ ಕೃಷ್ಣಪ್ಪಾ ಬ್ಯಾಕೂಡ, ಪತ್ರಕರ್ತ ಬಾಬು ಸುಂಕದ, ವಕೀಲ ಬಿ.ಆಯ್.ಅಲಗೂರಿ ಮತ್ತಿತರರಿದ್ದರು.






