ಸ್ಥಳೀಯ ವಿದ್ಯುತ್ ಸಹಕಾರಿ ಸಂಘದ ನೌಕರರಿಗೆ ಖಾಯಂ ನೇಮಕಾತಿ ಆದೇಶ ಪತ್ರಗಳನ್ನು ವಿತರಣಾ ಸಮಾರಂಭದಲ್ಲಿ ಸಚಿವ ಸತೀಶ ಜಾರಕಿಹೊಳಿ ಮಾತನಾಡಿದರು. ಜಯಗೌಡ ಪಾಟೀಲ, ವಿಷ್ಣು ರೇಡೇಕರ, ಎಂ.ಡಿ ರವೀಂದ್ರ ಪಾಟೀಲ, ನೇಮಿನಾಥ ಖೇಮಲಾಪೂರೆ, ದುರದುಂಡಿ ನಾಯಿಕ ಇತರರಿದ್ದರು.
ಹುಕ್ಕೇರಿ : ಗ್ರಾಹಕರ, ಸದಸ್ಯರ ಮತ್ತು ಸಿಬ್ಬಂದಿಗಳ ವಿಶ್ವಾಸಕ್ಕೆ ಚ್ಯುತಿ ಬರದಂತೆ ಆಡಳಿತ ಮಂಡಳಿ ಕಾರ್ಯ ನಿರ್ವಹಿಸಿ ವಿಶ್ವಾಸ ಗಳಿಸಿಕೊಂಡಾಗ ಮಾತ್ರ ಇನ್ನೆರಡು ತಿಂಗಳಲ್ಲಿ ಬರುವ ವಿದ್ಯುತ್ ಸಹಕಾರಿ ಸಂಘದ ಚುನಾವಣೆಯಲ್ಲಿ ಗೆಲವು ಸಾಧಿಸಬಹುದು ಎಂದು ಜಿಲ್ಲಾ ಉಸ್ತುವಾರಿ, ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಶನಿವಾರದಂದು ಸ್ಥಳೀಯ ವಿದ್ಯುತ್ ಸಹಕಾರಿ ಸಂಘಕ್ಕೆ ನೇಮಕಗೊಂಡ ನೌಕರರಿಗೆ ನೇಮಕಾತಿ ಆದೇಶ ಪತ್ರಗಳ ವಿತರಣಾ ಸಮಾರಂಭದಲ್ಲಿ ಮಾತನಾಡಿದರು. ಹಲವು ವರ್ಷಗಳಿಂದ ಈ ಸಂಘದ ಆಡಳಿತ ಮಂಡಳಿ ಚುಕ್ಕಾಣಿ ಹಿಡಿದವರು ಇನ್ನೆರಡು ತಿಂಗಳಲ್ಲಿ ಬರುವ ಸಂಘದ ಚುನಾವಣೆ ತಾಲೀಮು ಪ್ರಾರಂಭಿಸಿದ್ದಾರೆ. ಅವರನ್ನು ಎದುರಿಸಬೇಕಾದರೆ ಆಡಳಿತ ಮಂಡಳಿಯ ಅಧ್ಯಕ್ಷರಿಗೆ 10 ನಿರ್ದೇಶಕರು ಸಹಕಾರ ಕೊಡಬೇಕು ಎಂದರು.
ಸರಕಾರಕ್ಕೆ ವಿದ್ಯುತ್ ಸಹಕಾರಿ ಸಂಘದವರು ದಂಡದ ರೂಪದಲ್ಲಿ ಕೊಡಬೇಕಾದ 200 ಕೋಟಿ ರೂ ಬಾಕಿ ಮನ್ನಾ ಮಾಡಲು ಈಗಾಗಲೇ ಇಂಧನ ಸಚಿವರಾದ ಕೆ.ಜೆ.ಜಾರ್ಜ ಅವರ ಜೊತೆಗೆ ಮಾತನಾಡಿದ್ದೇನೆ.ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆಂದರು.ಸಂಘದ ವ್ಯಾಪ್ತಿಯ ಗ್ರಾಮ ಪಂಚಾಯತಿಗಳಿಂದ ಬರಬೇಕಾಗಿದ್ದ 12 ಕೋಟಿ ರೂ ಬಾಕಿ ಬಿಲ್ನಲ್ಲಿ 4 ಕೋಟಿ ರೂ ತುಂಬಿಸಲಾಗಿದೆ.ಬಾಕಿ ಉಳಿದಿರುವ 8 ಕೋಟಿ ರೂಗಳನ್ನು ಸಹ ಆದಷ್ಟು ಬೇಗ ವಸೂಲಾತಿಗೆ ಸಹಕರಿಸಲು ಜಿ.ಪಂ ಸಿ.ಇ.ಒ ಅವರಿಗೆ ತಿಳಿಸಿದ್ದೇನೆ ಎಂದರು.
ನಿರಂತರ ವಿದ್ಯುತ್ ಯೋಜನೆಯನ್ನು ಪ್ರಾಯೋಗಿಕವಾಗಿ ಎಲಿಮುನ್ನೋಳಿ ಗ್ರಾಮಕ್ಕೆ ಅಳವಡಿಸಲಾಗುತ್ತಿದ್ದು ಇದರ ಜತೆಗೆ ಶಿಂಧೆವಾಡಿ ಮತ್ತು ಇಂಗಳಿ ಗ್ರಾಮದಲ್ಲೂ ಶೀಘ್ರದಲ್ಲಿ ಅಳವಡಿಸುತ್ತೇವೆ. ಮುಂಬರುವ ದಿನಗಳಲ್ಲಿ ಸಂಘದ ವ್ಯಾಪ್ತಿಯ ಗ್ರಾಮಗಳಲ್ಲಿ ಈ ಯೋಜನೆಗೆ ಚಾಲನೆ ನೀಡುವುದಾಗಿ ತಿಳಿಸಿದರು. ಖಾಸಗಿ ಕಂಪನಿಗಳಿಂದ ಕಡಿಮೆ ದರದಲ್ಲಿ ವಿದ್ಯುತ್ ಖರೀದಿಸಿ ಗ್ರಾಹಕರಿಗೆ ನೀಡುವ ಚಿಂತನೆ ಮಾಡಲಾಗಿದೆ. ಒಟ್ಟಾರೆ ಈ ಸಂಘದ ಅಭಿವೃದ್ಧಿಗೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಭರವಸೆಯಿತ್ತರು.
ಮಾಜಿ ಸಚಿವ ಶಶಿಕಾಂತ ನಾಯಿಕ ಮತ್ತು ಸಂಘದ ನಿರ್ದೇಶಕ ಶಶಿರಾಜ ಪಾಟೀಲ ಮಾತನಾಡಿ ರೈತರಿಗೆ ಬಹಳಷ್ಟು ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಆಡಳಿತ ಮಂಡಳಿಯವರು ಬದಲಾವಣೆ ಮಾಡಿದ್ದಾರೆ. ವಿದ್ಯುತ್ ಸಂಬಂಧಿತ ಯಾವುದೇ ಸಮಸ್ಯೆಗಾಗಿ ಯಾರ ಮನೆ ಬಾಗಿಲಿಗೂ ಹೋಗಿ ಕಾಯಬೇಕಾಗಿಲ್ಲ. ಆಡಳಿತ ಮಂಡಳಿಯವರೇ ನೇರವಾಗಿ ನಿಮ್ಮ ಸಮಸ್ಯೆ ಆಲಿಸಿ ಪರಿಹರಿಸುತ್ತಾರೆಂದರು. ಸಂಘದ ಸ್ಥಾಪನೆಯ ರೂವಾರಿ ದಿ.ಅಪ್ಪಣ್ಣಗೌಡರ ಕನಸನ್ನು ನನಸು ಮಾಡುವುದೇ ಈಗಿನ ಮಂಡಳಿಯದ್ದಾಗಿದೆ ಎಂದರು. ನಂತರ 124 ಜನ ಸಿಬ್ಬಂದಿಗಳಿಗೆ ಖಾಯಂ ನೇಮಕಾತಿ ಆದೇಶ ಪತ್ರಗಳನ್ನು ವಿತರಿಸಿದರು.

ಸಂಘದ ಅಧ್ಯಕ್ಷ ಜಯಗೌಡ ಪಾಟೀಲ, ಉಪಾಧ್ಯಕ್ಷ ವಿಷ್ಣು ರೇಡೇಕರ, ಕುನಾಲ ಪಾಟೀಲ, ಜೋಮಲಿಂಗ ಪಟೋಳಿ, ಈರಪ್ಪಾ ಬಂಜಿರಾಮ, ಬಸಗೌಡ ಮಗೆನ್ನವರ, ಸೋಮಲಿಂಗ ಪಾಟೀಲ, ಪುರಸಭೆ ಅಧ್ಯಕ್ಷ ಇಮ್ರಾನ್ ಮೋಮಿನ್, ಮುಖಂಡರಾದ ಮೌನೇಶ ಪೋತದಾರ, ರಿಷಬ್ ಪಾಟೀಲ ಮತ್ತಿತರರಿದ್ದರು. ಸಂಘದ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಪಾಟೀಲ ಸ್ವಾಗತಿಸಿದರು. ಸ್ಥಾನಿಕ ಅಭಿಯಂತರ ನೇಮಿನಾಥ ಖೇಮಲಾಪೂರೆ ನಿರೂಪಿಸಿದರು. ನಿರ್ದೇಶಕ ರವೀಂದ್ರ ಹಿಡಕಲ್ ವಂದಿಸಿದರು.

ಸಚಿವರ ಭಾಷಣದ ಮುಖ್ಯಾಂಶಗಳು:
- ಶಾಸಕ ನಿಖಿಲ ಕತ್ತಿ ಅವರನ್ನು ಸಮಾರಂಭಕ್ಕೆ ಆಹ್ವಾನಿಸದ ಕುರಿತು ಸಚಿವರು ಆಕ್ಷೇಪಿಸಿದರು.
- 17 ವರ್ಷಗಳಿಂದ ಸಂಘದ ಆಡಳಿತ ಗಮನಿಸಿ ಪರೋಕ್ಷವಾಗಿ ಮಾರ್ಗದರ್ಶನ ಮಾಡುತ್ತಿದ್ದ ನಾನು ಇದೀಗ ನೇರವಾಗಿ ಆಡಳಿತ ಮತ್ತು ಅಭಿವೃದ್ಧಿಗೆ ಶ್ರಮಿಸುತ್ತೇನೆ.
- ಸಂಘಕ್ಕೆ ಅಪ್ಪಣ್ಣಗೌಡರ ಹೆಸರು ಇಡುವ ಕಾರ್ಯ ಮಾಡಬೇಕು. ಸಿಬ್ಬಂದಿಗಳು ರಾಜಕೀಯರಹಿತವಾಗಿ ದುಡಿಯಬೇಕು.





