ತಾಲೂಕಿನ ಬೆಲ್ಲದ ಬಾಗೇವಾಡಿಯಲ್ಲಿ ಕೋವಿಡ್ ಮಹಾಮಾರಿಯಿಂದ ಪಾಲಕರನ್ನು ಕಳೆದುಕೊಂಡು ವಿದ್ಯಾರ್ಥಿನಿ ಲಕ್ಷ್ಮೀ ಬ್ಯಾಳಿ ಅವಳನ್ನು ಮಾಜಿ ಸಂಸದ ರಮೇಶ ಕತ್ತಿ ಶೈಕ್ಷಣೀಕ ದತ್ತು ಪಡೆದರು. ಸತ್ತೆಪ್ಪಾ ನಾಯಿಕ, ಈರಪ್ಪಾ ನೇರ್ಲಿ, ಶ್ರೀಶೈಲ ಹಿರೇಮಠ, ಕೆ.ಸಿ.ಮುಚಖಂಡಿ, ಎಸ್.ಎಂ.ಭಂಗಿ ಮತ್ತಿತರರಿದ್ದರು.
ಹುಕ್ಕೇರಿ: ಕೋವಿಡ್ ಮಹಾಮಾರಿಯಿಂದ ಪಾಲಕರನ್ನು ಕಳೆದುಕೊಂಡ ಗೋಕಾಕ ತಾಲೂಕಿನ ಬೆಣಚಿನಮರಡಿ ಗ್ರಾಮದ ಲಕ್ಷ್ಮೀ ನಿಂಗಪ್ಪಾ ಬ್ಯಾಳಿ ಅವಳ ಪಿ.ಯು.ಸಿ ವಿದ್ಯಾಭ್ಯಾಸ ಸೇರಿದಂತೆ ಕಾಲೇಜಿನ ವೆಚ್ಚ ಭರಿಸುವುದರ ಜತೆಗೆ ಅವಳ ಸಂಪೂರ್ಣ ಜವಾಬ್ದಾರಿ ಹೊರುವುದಾಗಿ ಮಾಜಿ ಸಂಸದ ರಮೇಶ ಕತ್ತಿ ಹೇಳಿದರು.
ಮಂಗಳವಾರದಂದು ತಾಲೂಕಿನ ಬೆಲ್ಲದ ಬಾಗೇವಾಡಿಯಲ್ಲಿ ವಿದ್ಯಾರ್ಥಿನಿ ಲಕ್ಷ್ಮೀ ನಿಂಗಪ್ಪಾ ಬ್ಯಾಳಿ ಅವಳನ್ನು ವ್ಹಿ.ಎಂ.ಕತ್ತಿ ಗ್ರೂಪ್ ಆಪ್ ಇನ್ಸಟ್ಯೂಟ್ನ ಪಿ.ಯು.ಸಿ ಪ್ರಥಮ ವರ್ಷದ ಕಾಮರ್ಸ ವಿಭಾಗದಲ್ಲಿ ದಾಖಲಾತಿಗೆ ಅನುಮೋದಿಸಿ ಮಾತನಾಡಿದರು. ನನಗೆ ಅವಳಿ ಗಂಡು ಮಕ್ಕಳಿದ್ದು ಇದೀಗ ಈ ಮಗುವನ್ನು ನನ್ನ ಮಗಳಂತೆ ಪೋಷಿಸಿ ಅವಳ ಶೈಕ್ಷಣೀಕ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.
ಇದೇ ಸಂದರ್ಭದಲ್ಲಿ ಕಾಲೇಜು ಶಿಕ್ಷಣ ಪೂರೈಸುವವರೆಗೆ ಮೋಬೈಲ್ ಬಳಕೆ ಮಾಡಬಾರದು, ಕೇವಲ ವಿದ್ಯಾಭ್ಯಾಸ ಒಂದೇ ನಿನ್ನ ಗುರಿ ಆಗಿರಬೇಕೆಂದು ತಿಳಿಸಿದರು. ನಂತರ ವ್ಹಿ.ಎಂ.ಕತ್ತಿ ಗ್ರೂಪ್ ಆಪ್ ಇನ್ಸಟ್ಯೂಟ್ನ ಪಿ.ಯು ವಿಭಾಗದ ಪ್ರಾಚಾರ್ಯ ಎಸ್.ಎಂ.ಭಂಗಿ ಮತ್ತು ಆಡಳಿತಾಧಿಕಾರಿ ಕೆ.ಸಿ.ಮುಚಖಂಡಿ ಅವರಿಗೆ ಈ ವಿದ್ಯಾರ್ಥಿನಿಯ ಕಾಲೇಜು ಶುಲ್ಕವನ್ನು ನಮ್ಮ ರಾಜರಾಜೇಶ್ವರಿ ಟ್ರಸ್ಟ ವತಿಯಿಂದ ಭರಿಸಲಾಗುತ್ತದೆ. ಅವಳಿಗೆ ಗುಣಮಟ್ಟದ ಶಿಕ್ಷಣದ ಜತೆಗೆ ಅವಳ ಶೈಕ್ಷಣೀಕ ಪ್ರಗತಿಯನ್ನು ತಮಗೆ ತಿಳಿಸುವಂತೆ ಸೂಚಿಸಿದರು.
ಮುಖಂಡರಾದ ಸತ್ತೆಪ್ಪಾ ನಾಯಿಕ, ಈರಪ್ಪಾ ನೇರ್ಲಿ, ನೇರ್ಲಿ ಸರಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಶ್ರೀಶೈಲ ಹಿರೇಮಠ ಇತರರಿದ್ದರು.





