ಸ್ಥಳೀಯ ಪುರಸಭೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವ ಸತೀಶ ಜಾರಕಿಹೊಳಿ ಅವರನ್ನು ಸನ್ಮಾನಿಸಿದರು. ಇಮ್ರಾನ ಮೋಮಿನ, ಜ್ಯೋತಿ ಬಡಿಗೇರ, ಮಹಾವೀರ ನಿಲಜಗಿ, ರೇಖಾ ಚಿಕ್ಕೋಡಿ ಇತರರಿದ್ದರು.
ಹುಕ್ಕೇರಿ: ಪಟ್ಟಣದಲ್ಲಿ ಬಹಳಷ್ಟು ಅನಧಿಕೃತ ಲೇಔಟಗಳಿದ್ದು, ಪುರಸಭೆ ಅಧಿಕಾರಿಗಳು ರೇರಾ ಕಾಯ್ದೆ ಗಾಳಿಗೆ ತೂರಿ ಅಂತಹ ನಿವೇಶನಗಳ ಉತಾರಗಳನ್ನು ಮಾಲೀಕರಿಗೆ ನೀಡಿದ್ದಾರೆ. ಅದರಿಂದ ಸಾರ್ವಜನಿಕರು ಮೋಸ ಹೋಗಿ ನಿವೇಶನ ಖರೀದಿ ಮಾಡುತ್ತಾರೆ. ನಂತರ ಅಲ್ಲಿನ ಮೂಲಭೂತ ಸೌಲಭ್ಯಗಳಿಗೆ ಪುರಸಭೆಗೆ ಅಲೆದಾಡುವಂತಾಗಿದೆ ಎಂದು ಮುಖಂಡರು ಮತ್ತು ಪುರಸಭೆ ಕೆಲ ಸದಸ್ಯರು ಸಚಿವ ಸತೀಶ ಜಾರಕಿಹೊಳಿ ಅವರ ಬಳಿ ಆರೋಪಿಸಿದರು.
ಶನಿವಾರದಂದು ಸ್ಥಳೀಯ ಪುರಸಭೆಯಲ್ಲಿ ಸಚಿವರ ಕೈಗೊಂಡ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದರು. ಕೋರ್ಟ ವೃತ್ತದ ಬಳಿಯ ಬೆಳವಿ ರಸ್ತೆ ಅತಿಕ್ರಮಣ ಮತ್ತು ಅಲದರಲ್ಲಿ ನಿರ್ಮಿಸಿದ ವಾಣಿಜ್ಯ ಮಳಿಗೆಗಳ ತೆರವುಗೊಳಸಲು ಪುರಸಭೆ ಅಧಿಕಾರಿಗಳು ಮುಂದಾಗುತ್ತಿಲ್ಲವೆಂದು ಮೌನೇಶ ಪೋತದಾರ ಮತ್ತು ಸೋಮಶೇಖರ ಮಠಪತಿ ಆರೋಪಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಜಯ ರವದಿ, ಮುಖಂಡರಾದ ರವಿ ಕರಾಳೆ, ತಮ್ಮಣ್ಣಗೌಡ ಪಾಟೀಲ, ಚಂದ್ರಶೇಖರ ಗಂಗಣ್ಣವರ ಮೊದಲಾದವರು ಮಾತನಾಡಿ ಪುರಸಭೆ ಅಧಿಕಾರಿಗಳು ಕಟ್ಟಡಗಳ ನಿರ್ಮಾಣಕ್ಕೆ ಪರವಾನಿಗೆ ಕೊಡುವಾಗ ಸ್ಥಳ ವೀಕ್ಷಿಸದೇ ಕಾರ್ಯಾಲಯದಲ್ಲಿಯೇ ಕುಳಿತು ಆದೇಶ ಪತ್ರ ನೀಡುತ್ತಾರೆ. ಇದರಿಂದ ಇಂತಹ ಸಮಸ್ಯೆ ಉದ್ಭವಿಸಿವೆ ಎಂದರು. ಪಟ್ಟಣದಲ್ಲಿ ಅನಧಿಕೃತ ನಳ ಸಂಪರ್ಕ ಬಹಳಷ್ಟಿವೆ, ಸರ್ವೆ ನಂ:116 ರ ನಿವೇಶನ ಸೇರಿದಂತೆ ಹಲವಾರು ಪ್ರಕರಣಗಳು ನ್ಯಾಯಾಲಯದಲ್ಲಿದ್ದು ಅವುಗಳಿಗೆ ಸರಿಯಾಗಿ ಸ್ಪಂದಿಸದಿರುವುದರಿಂದ ವ್ಯಾಜ್ಯಗಳಿಗೆ ಪರಿಹಾರ ದೊರಕುತ್ತಿಲ್ಲ. ಈಗಾಗಲೇ ಅನಧಿಕೃತ ಕಟ್ಟಡಗಳಿಗೆ ನಳ, ವಿದ್ಯುತ್ ಸೇರಿದಂತೆ ಇತರ ಸೌಲಭ್ಯ ಪಡೆದುಕೊಂಡ ಅಲ್ಲಿಯ ನಿವಾಸಿಗಳು ತೆರಿಗೆ ತುಂಬಿಲ್ಲ. ಇದರಿಂದ ಪುರಸಭೆಗೆ ಕೋಟ್ಯಾಂತರ ರೂ ಆದಾಯ ಬರುವುದು ತಪ್ಪಿದೆ ಎಂದು ಆರೋಪಿಸಿದರು.
ಸಚಿವರು ಮುಖಂಡರ ಮತ್ತು ಸಾರ್ವಜನಿಕರ ಅಹವಾಲು ಆಲಿಸಿದ ಬಳಿಕ ಮಾತನಾಡುತ್ತಾ ಅಧಿಕಾರ ಇರುವುದು ಜನರ ಸೇವೆಗಾಗಿ ಹೊರತು ಅವರನ್ನು ಕಾಡುವುದಕ್ಕಲ್ಲವೆಂಬ ಮನೋಭಾವದಿಂದ ಕರ್ತವ್ಯ ನಿಭಾಯಿಸಬೇಕು.ಜನರ ಎಲ್ಲ ಅಹವಾಲು ಮತ್ತು ನ್ಯಾಯಾಲಯದ ವ್ಯಾಜ್ಯಗಳ ಮಾಹಿತಿಯನ್ನು ವಾರದೊಳಗಾಗಿ ತಮಗೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.ಅನಧಿಕೃತ ನಿವೇಶನ, ರೇರಾ ಕಾಯ್ದೆ ಉಲ್ಲಂಘಿಸಿದವರಿಗೆ ನೋಟೀಸ್ ಕೊಟ್ಟು ಅವುಗಳ ಪರವಾನಿಗೆ ರದ್ದುಗೊಳಿಸಲು ಆದೇಶಿಸಿದರು.ಇದೇ ಸಂದರ್ಭದಲ್ಲಿ ಸಚಿವರನ್ನು ಸನ್ಮಾನಿಸಲಾಯಿತು.
ಬ್ಲಾಕ ಕಾಂಗ್ರೆಸ್ ಅಧ್ಯಕ್ಷ ವಿಜಯ ರವದಿ, ಪುರಸಭೆ ಅಧ್ಯಕ್ಷ ಇಮ್ರಾನ ಮೋಮಿನ, ಉಪಾಧ್ಯಕ್ಷ್ಷೆ ಜ್ಯೋತಿ ಬಡಿಗೇರ, ಸ್ಥಾಯಿ ಸಮಿತಿ ಚೇರಮನ್ ಮಹಾಂತೇಶ ತಳವಾರ, ಸದಸ್ಯರಾದ ಮಹಾವೀರ ನಿಲಜಗಿ, ಸದಾಶಿವ ಕರೆಪ್ಪಗೋಳ, ರಾಜು ಮುನ್ನೋಳಿ, ರೇಖಾ ಚಿಕ್ಕೋಡಿ, ಸುರೇಖಾ ಗಳತಗಿಮಠ ಮತ್ತಿತರರಿದ್ದರು.ಪುರಸಭೆ ಗೀತಾ ಕಾಗತೀಕರ ಸ್ವಾಗತಿಸಿದರು. ಮುಖ್ಯಾಧಿಕಾರಿ ಈಶ್ವರ ಸಿದ್ನಾಳ ನಿರೂಪಿಸಿದರು.ಅಭಿಯಂತರ ರಾಜಶೇಖರ ಪಟ್ಟಣಶೆಟ್ಟಿ ವಂದಿಸಿದರು.
- ಕೊಳಚೆ ಮತ್ತು ಸೊಳ್ಳೆಗಳ ತಾಣದಲ್ಲಿ ತರಕಾರಿ ಮಾರುಕಟ್ಟೆ ನಿರ್ಮಿಸುತ್ತಿರುವುದು ಮೂರ್ಖತನ. ಆದರೆ ಇದನ್ನು ತಡೆ ಹಿಡಿಯಲು ಬರುವುದಿಲ್ಲ. ಕಾರಣ ಕೊಳಚೆ ಸ್ವಚ್ಚ ಗೊಳಿಸಿ ತರಕಾರಿ ಮಾರುಕಟ್ಟೆ ಮಳಿಗೆ ನಿರ್ಮಿಸುಬೇಕು.: ಸತೀಶ ಜಾರಕಿಹೊಳಿ





