ಹುಕ್ಕೇರಿ ತಾ.ಪಂ ಸಭಾಭವನದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಶಾಸಕ ನಿಖಿಲ ಕತ್ತಿ ಮಾತನಾಡಿದರು. ಮಂಜುಳಾ ನಾಯಕ, ಟಿ.ಆರ್.ಮಲ್ಲಾಡದ, ರಾಮನಗೌಡ ಕನ್ನೋಳಿ ಇದ್ದರು.
ಹುಕ್ಕೇರಿ: ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಮತ್ತು ಜನಪರ ಕಾಮಗಾರಿಗಳಿಗೆ ಅನುದಾನ ಕೊರತೆಯಾಗುತ್ತಿದೆ ಎಂದು ಶಾಸಕ ನಿಖಿಲ ಕತ್ತಿ ಆರೋಪಿಸಿದ ಘಟನೆ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ನಡೆಯಿತು.
ಶುಕ್ರವಾರದಂದು ಸ್ಥಳೀಯ ತಾ.ಪಂ ಸಭಾಭವನದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಜೆ.ಜೆ.ಎಂ ಕಾಮಗಾರಿ ವಿಳಂಬ ಕುರಿತು ಅಧಿಕಾರಿಗಳನ್ನು ಪ್ರಶ್ನಿಸಿದಾಗ ಅನುದಾನದ ಕೊರತೆ ಹಾಗೂ ಗುತ್ತಿಗೆದಾರರ ಬಿಲ್ ಸಮಸ್ಯೆಯಿಂದ ವಿಳಂಬ ಆಗುತ್ತಿದೆ ಎಂದು ಉತ್ತರಿಸಿದಾಗ ಶಾಸಕರು ಸಭೆಯಲ್ಲಿದ್ದ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಿಗೆ ಮೇಲಿನಂತೆ ಉತ್ತರಿಸಿದರು.
ಅಂಗನವಾಡಿ ಕೇಂದ್ರಗಳ ಸ್ವಂತ ಕಟ್ಟಡಕ್ಕೆ ಹುಕ್ಕೇರಿ ಮತ್ತು ಸಂಕೇಶ್ವರ ಪುರಸಭೆ ಅಧಿಕಾರಿಗಳು ಸ್ಥಳಾವಕಾಶ ಕಲ್ಪ್ಪಿಸುವಂತೆ ಆದೇಶಿಸಿದರು. ಸಿಡಿಪಿಒ ಹರಿಪ್ರಸಾದ ಸಿ ಮಾತನಾಡಿ ಚಿಕ್ಕ ಮಕ್ಕಳ ಮನರಂಜನೆ ಮತ್ತು ಕಲಿಕೆಗೆ ಸಹಕಾರಿ ಆಗುವಂತೆ ತಾಲೂಕಿನ 42 ಕೇಂದ್ರಗಳಿಗೆ ಟಿ.ವಿ ಒದಗಿಸಿರುವುದಾಗಿ ತಿಳಿಸಿದರು.
ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಆರ್.ಬಿ.ನಾಯ್ಕರ ಮಾತನಾಡಿ ಈ ಬಾರಿ ಮುಂಗಾರು ಮಳೆ ಚೆನ್ನಾಗಿ ಆಗುತ್ತಿದ್ದು ಈಗಾಗಲೇ ತಾಲೂಕಿನಲ್ಲಿ ಶೇ.37 ರಷ್ಟು ಬಿತ್ತನೆ ಆಗಿದ್ದು, ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನು ಸಾಕಷ್ಟಿದ್ದು ರೈತರಿಗೆ ಸಮರ್ಪಕ ಪೂರೈಕೆ ಮಾಡಲಾಗುತ್ತಿದೆ ಎಂದರು.
ಕೆಡಿಪಿ ಜಿಲ್ಲಾ ಸಮಿತಿ ಸದಸ್ಯ ಬಸವರಾಜ ಕೋಳಿ ಮಾತನಾಡಿ ಅಕ್ಷರ ದಾಸೋಹ ಅಧಿಕಾರಿ ಯಾವುದೇ ಅಡುಗೆ ಕೇಂದ್ರಗಳಿಗೆ ಭೇಟಿ ನೀಡುತ್ತಿಲ್ಲ ಎಂದು ಆಕ್ಷೇಪಿಸಿದರು.ಗ್ರಾಮ ಪಂಚಾಯತಿಗಳಲ್ಲಿ 15ನೇ ಹಣಕಾಸು ಯೋಜನೆ ಕಾಮಗಾರಿಗಳ ವಿವರ ಸರಿಯಾಗಿ ನೀಡುತ್ತಿಲ್ಲ.ತಕ್ಷಣ ಕ್ರಿಯಾಯೋಜನೆ, ಆಗಿರುವ ಕಾಮಗಾರಿಗಳ ವಿವರಗಳನ್ನು ಕೆಡಿಪಿ ಸದಸ್ಯರಿಗೆ ಮತ್ತು ಶಾಸಕರಿಗೆ ಸಲ್ಲಿಸಬೇಕೆಂದು ತಾ.ಪಂ ಇ.ಒ ಅವರಿಗೆ ಒತ್ತಾಯಿಸಿದರು.
ಬಿ.ಇ.ಒ ಪ್ರಭಾವತಿ ಪಾಟೀಲ ಮಾತನಾಡಿ ತಾಲೂಕಿನಲ್ಲಿ 73 ಶಾಲಾ ಕೊಠಡಿಗಳು ಸಂಪೂರ್ಣ ಶಿಥಿಲಾವಸ್ಥೆಯಲ್ಲಿದ್ದು ಅವುಗಳನ್ನು ಕೆಡವಲು ಸೂಚಿಸಬೇಕೆಂದು ಶಾಸಕರಲ್ಲಿ ಮನವಿಸಿಕೊಂಡರು.
ಇದೇ ಸಂದರ್ಭದಲ್ಲಿ ತಾಲೂಕಿನ ೨೨ ಗ್ರಾಮ ಪಂಚಾಯತಿಗಳಿಗೆ ದೊರೆತ ಸಂಪೂರ್ಣ ಕ್ಷಯ ಮುಕ್ತ ಗ್ರಾಮಗಳ ಪ್ರಶಸ್ತಿ ಮತ್ತು 2024-25 ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳಿಸಿದ ತಾಲೂಕಿನ ಮೂವರು ಟಾಪರ್ಗಳಿಗೆ ಸರಕಾರದಿಂದ ನೀಡಿದ ಲ್ಯಾಪಟ್ಯಾಪಗಳನ್ನು ವಿತರಿಸಿದರು.


ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕಾಧ್ಯಕ್ಷ ಶ್ಯಾನೂರ ತಹಸೀಲ್ದಾರ, ಜಿಲ್ಲಾ ಕೆಡಿಪಿ ಸದಸ್ಯ ಬಸವರಾಜ ಕೋಳಿ, ತಹಸೀಲ್ದಾರ ಮಂಜುಳಾ ನಾಯಕ, ತಾ.ಪಂ ಇ.ಒ ಟಿ.ಆರ್.ಮಲ್ಲಾಡದ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಾಮನಗೌಡ ಕನ್ನೋಳಿ ಮತ್ತು ತಾಲೂಕಾಡಳಿತದ ಎಲ್ಲ ಅಧಿಕಾರಿಗಳಿದ್ದರು. ಪ್ರಶಾಂತ ಮುನ್ನೋಳಿ ಸ್ವಾಗತಿಸಿದರು. ಅವಿನಾಶ ಹೊಳೆಪ್ಪಗೋಳ ನಿರೂಪಿಸಿ, ವಂದಿಸಿದರು





