ಸ್ಥಳೀಯ ಮಹಾವೀರ ಶಿಕ್ಷಣ ಸಂಸ್ಥೆಯ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಬೀಳ್ಕ್ಕೊಡುಗೆ ಮತ್ತು ಗುರುಪೂಜೆ ಸಮಾರಂಭವನ್ನು ಮಹಾವೀರ ನಿಲಜಗಿ ಉದ್ಘಾಟಿಸಿದರು. ಬಸವರಾಜ ಕೊಂಡಿ, ಬಾಬು ಸುಂಕದ, ಸಂಜೀವ ಮುತಾಲಿಕ, ಪಿ.ಜಿ.ಕೊಣ್ಣೂರ ಇತರರಿದ್ದರು.
ಹುಕ್ಕೇರಿ: ಪಾಲಕರು ಪರೀಕ್ಷೆ ಮುಗಿಯುವವರೆಗೆ ಮನೆಯಲ್ಲಿ ನಿತ್ಯ ಸಂಜೆ ೩ ತಾಸು ಮೋಬೈಲ್ ಬಳಕೆ ಮಾಡಬಾರದು. ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಕಾರಿಯಾಗಿ ಅವರಲ್ಲಿ ಪರೀಕ್ಷಾ ಭಯ ಹೋಗಲಾಡಿಸಿ ಆತ್ಮವಿಶ್ವಾಸ ತುಂಬುವ ಕಾರ್ಯ ಮಾಡಬೇಕೆಂದು ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘ ಮತ್ತು ಮಹಾವೀರ ಶಿಕ್ಷಣ ಸಂಸ್ಥೆ ಅಧ್ಯಕ್ಷರಾದ ಮಹಾವೀರ ನಿಲಜಗಿ ಹೇಳಿದರು.
ಶನಿವಾರದಂದು ಹುಕ್ಕೇರಿ ಹೊರವಲಯದ ಮಹಾವೀರ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಬೀಳ್ಕ್ಕೊಡುಗೆ ಮತ್ತು ಗುರುಪೂಜೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿದ್ಯಾರ್ಥಿಗಳು ತಂದೆ ತಾಯಿ ಶಿಕ್ಷಕರಿಗೆ ಗೌರವ ನೀಡಬೇಕು. ಕಲಿತ ಶಾಲೆ ಮತ್ತು ಶಿಕ್ಷಕರು ಹೆಮ್ಮೆ ಪಡುವಂತಹ ಸಾಧಕರಾಗಬೇಕು. ಆ ನಿಟ್ಟಿನಲ್ಲಿ ಸತತ ಅಧ್ಯಯನದ ಜತೆಗೆ ಏಕಾಗ್ರತೆ ಬೆಳೆಸಿಕೊಳ್ಳುವಂತೆ ಸಲಹೆ ನೀಡಿದರು. ಶಿಕ್ಷಣ ಸಂಸ್ಥೆ ಶೈಕ್ಷಣೀಕ ಅಭಿವೃದ್ಧಿಗೆ ಪೂರಕವಾದ ಸೌಲಭ್ಯ ಒದಗಿಸುತ್ತದೆ. ಆದರೆ ವಿದ್ಯಾರ್ಥಿಗಳ ಸಾಧನೆಗೆ ಶಿಕ್ಷಕರ ಶ್ರಮ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.
ಪತ್ರಕರ್ತರಾದ ಬಾಬು ಸುಂಕದ, ಸಂಜೀವ ಮುತಾಲಿಕ ಮತ್ತು ಪಿ.ಜಿ.ಕೊಣ್ಣೂರ ಮಾತನಾಡಿ ಮಹಾವೀರ ಶಾಲೆ ಮಕ್ಕಳ ಸುರಕ್ಷತೆ ಶಿಸ್ತಿಗೆ ಹೆಸರಾಗಿದೆ. ಇಲ್ಲಿ ಕಲಿತ ಮಕ್ಕಳಿಗೆ ಉಜ್ವಲ ಭವಿಷ್ಯ ಕಟ್ಟಿಟ್ಟ ಬುತ್ತಿ. ಗುರುಕುಲ ಮಾದರಿ ಕಲಿಸಿದ ಗುರುಗಳಿಗೆ ಪಾದಪೂಜೆ ಮಾಡುವ ಮೂಲಕ ವಿದ್ಯಾರ್ಥಿಗಳಲ್ಲಿ ಒಳ್ಳೆಯ ಸಂಸ್ಕಾರ ರೂಪಿಸುವಲ್ಲಿ ಮಹಾವೀರ ಶಿಕ್ಷಣ ಸಂಸ್ಥೆ ಯಶಸ್ವಿಯಾಗಿದೆ. ಆತ್ಮವಿಶ್ವಾಸ, ಮೌಲ್ಯಮಾಪನ, ಓದುವ ಜೊತೆಗೆ ಬರವಣಿಗೆ ರೂಡಿಸಿಕೊಳ್ಳಬೇಕು. ಶಿಕ್ಷಣದಿಂದ ಸಮಾಜದಲ್ಲಿ ಗೌರವ ಸಿಗುತ್ತದೆ ಎಂಬ ಸಂಗತಿಯನ್ನು ವಿದ್ಯಾರ್ಥಿಗಳು ಅರಿತುಕೊಂಡು ಅಧ್ಯಯನ ಮಾಡಬೇಕೆಂದರು.

ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ಸಂಸ್ಥೆಯ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಶಿಕ್ಷಕರು ಮತ್ತು ಪಾಲಕರ ಪಾದಪೂಜೆ ನೆರವೇರಿಸಿ ಆಶೀರ್ವಾದ ಪಡೆದರು.

ನಂತರ ವಿದ್ಯಾರ್ಥಿಗಳಾದ ಸಹನಾ ಬಿಲಕಾರ, ಭಾಗ್ಯಶ್ರೀ ಪಾಟೀಲ, ಸ್ನೇಹಾ ಉಪ್ಪಾರ, ರಮಾ ಖೋತ, ಚಂದನಾ ಅಂಬಾರಿ ಮತ್ತು ಸರಸ್ವತಿ ಮುದಕನ್ನವರ ತಮ್ಮ ಶಾಲಾ ಅವಧಿಯ ಅಭಿಪ್ರಾಯಗಳನ್ನು ಹಂಚಿಕೊAಡರು.
ಸಂಸ್ಥೆಯ ಉಪಾಧ್ಯಕ್ಷ ಪ್ರಜ್ವಲ ನಿಲಜಗಿ, ಪತ್ರಕರ್ತ ಬಸವರಾಜ ಕೊಂಡಿ, ಮುಖ್ಯ ಶಿಕ್ಷಕ ಸಂಗಮೇಶ ಕರವನ್ನವರ ವೇದಿಕೆಯಲ್ಲಿದ್ದರು. ರೂಪಾ ಶೇರಖಾನೆ ಸ್ವಾಗತಿಸಿದರು. ರಾಘವೇಂದ್ರ ತಳವಾರ ನಿರೂಪಿಸಿದರು. ವಿರೇಶ ಕಡೆಮನಿ ವಂದಿಸಿದರು.





