ತಾಲೂಕಿನ ಹಿಡಕಲ್ ಡ್ಯಾಮಿನಲ್ಲಿ ನಡೆದ ಅಂತರಾಷ್ಟ್ರೀಯ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ಡಾ. ಸರಸ್ವತಿ ಕಳಸದ ಉದ್ಘಾಟಿಸಿದರು. ಎಚ್.ಹೊಳೆಪ್ಪಾ, ಗುರಪ್ಪಾ ತಳವಾರ, ಆರ್.ಬಿ.ಬನಶಂಕರಿ ಇತರರಿದ್ದರು.
ಹುಕ್ಕೇರಿ: ವೃದ್ಧಾಪ್ಯ ಎನ್ನುವುದು ಕೇವಲ ವಯಸ್ಸಿನಿಂದ ಬರುವುದಿಲ್ಲ, ಅದು ಅನುಭವದಿಂದ ಮಾತ್ರ ಸಾಧ್ಯ ಎಂದು ಧಾರವಾಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಡಾ. ಸರಸ್ವತಿ ಕಳಸದ ಅಭಿಪ್ರಾಯಪಟ್ಟರು.
ಬುಧವಾರದಂದು ತಾಲೂಕಿನ ಹಿಡಕಲ್ ಡ್ಯಾಮಿನಲ್ಲಿರುವ ಬಸವೇಶ್ವರ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ, ಭಾರತ ಸರ್ಕಾರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ, ಪ್ರಾದೇಶಿಕ ಸಂಪನ್ಮೂಲ ಮತ್ತು ತರಬೇತಿ ಕೇಂದ್ರ, ನೈಟಿಂಗೇಲ್ಸ್ ವೈಧ್ಯಕೀಯ ಟ್ರಸ್ಟ್, ಮಹಿಳಾ ಕಲ್ಯಾಣ ಸಂಸ್ಥೆ ಬೆಳಗಾವಿ ಹಾಗೂ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ಸಹಯೋಗದಲ್ಲಿ ನಡೆದ ಅಂತರಾಷ್ಟ್ರೀಯ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಹಿರಿಯ ನಾಗರಿಕರಿಗಾಗಿ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಹಿರಿಯ ನಾಗರಿಕರು ಸಮಾಜದಲ್ಲಿ ಇರುವಷ್ಟು ದಿನ ಹಸನ್ಮುಖಿಗಳಾಗಿ ಬದುಕಬೇಕೆಂದು ತಿಳಿಸಿದರು. ಸಮಾಜ ಸೇವೆಯು ಭವಿಷ್ಯದ ಪೀಳಿಗೆಗೆ ದಾರಿದೀಪವಾಗಬೇಕು ಎಂದರು.
ಹುಕ್ಕೇರಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎಚ್. ಹೊಳೆಪ್ಪ ಅವರು ಹಿರಿಯ ನಾಗರಿಕರಿಗಾಗಿ ಸರ್ಕಾರವು ಜಾರಿಗೆ ತಂದಿರುವ ಅನೇಕ ಯೋಜನೆಗಳ ಕುರಿತು ವಿವರಿಸಿದರು. ಬೆಂಗಳೂರಿನ ನೈಟಿಂಗೇಲ್ಸ್ ವೈದ್ಯಕೀಯ ಟ್ರಸ್ಟ್ ಅಧಿಕಾರಿ ಸುರೇಶ ಬಾಬು ಹಾಗೂ ಪ್ರವೀಣ ಮಾತನಾಡಿದರು.
ಮಹಿಳಾ ಕಲ್ಯಾಣ ಸಂಸ್ಥೆಯ ಸಂಸ್ಥಾಪಕ ಎಂ.ಎಸ್. ಚೌಗಲಾ ಅವರು ಮಾತನಾಡಿ ತಮ್ಮ ಸಂಸ್ಥೆ ನಡೆದು ಬಂದ ಹಿನ್ನಲೆ ಹಾಗೂ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ವಿವಿಧ ವೃದ್ಧಾಶ್ರಮಗಳ ಕುರಿತು ವಿವರಿಸಿದರು. ಬೆಳಗಾವಿಯ ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆಯ ವಿಶ್ರಾಂತ ಉಪ ನಿರ್ದೇಶಕರಾದ ಆರ್.ಬಿ. ಬನಶಂಕರಿ ಅವರು ಅಧ್ಯಕ್ಷತೆ ವಹಿಸಿದ್ದರು.
ಬಸವೇಶ್ವರ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಗುರಪ್ಪ ತಳವಾರ, ತಾಲೂಕ ನಿವೃತ್ತ ನೌಕರರ ಸಂಘದ ಕಾರ್ಯದರ್ಶಿ ಎಸ್.ಬಿ. ಸೇಬಣ್ಣವರ, ಹಿರಿಯ ಸಾಹಿತಿ ಎಸ್.ಎಂ. ಶಿರೂರ, ಪ್ರಕಾಶ ಹೊಸಮನಿ, ಜಯಶ್ರೀ ಮತ್ತಿಕೊಪ್ಪ ಮತ್ತಿತರರಿದ್ದರು. ನಿವೃತ್ತ ಶಿಕ್ಷಕ ಬಿ .ಎಸ್. ಮಾನೆ ಪ್ರಾರ್ಥಿಸಿದರು. ಯರಗಟ್ಟಿ ಕರ್ನಾಟಕ ಪಬ್ಲಿಕ್ ಶಾಲೆಯ ಪದವಿ ಪೂರ್ವ ವಿಭಾಗದ ಪ್ರಾಚಾರ್ಯ ಕಿರಣ ಚೌಗಲಾ ಅತಿಥಿಗಳನ್ನು ಪರಿಚಯಿಸಿದರು. ಸುಗಂಧ ಅಲಟ್ಟಿ ನಿರೂಪಿಸಿದರು. ಉಪನ್ಯಾಸಕ ಎ.ವೈ. ಸೋನ್ಯಾಗೋಳ ವಂದಿಸಿದರು.





