ಸ್ಥಳೀಯ ಪುರಸಭೆ ಎದುರಿಗೆ ನೂತನ ಸೇತುವೆ ನಿರ್ಮಾಣ ಕಾಮಗಾರಿಗೆ ಶಾಸಕ ನಿಖಿಲ ಕತ್ತಿ ಭೂಮಿ ಪೂಜೆ ನೆರವೇರಿಸಿದರು. ಇಮ್ರಾನ ಮೋಮಿನ, ಜ್ಯೋತಿ ಬಡಿಗೇರ, ಮಹಾವೀರ ನಿಲಜಗಿ, ಎ.ಕೆ.ಪಾಟೀಲ, ಮಹಾಂತೇಶ ತಳವಾರ ಇತರರಿದ್ದರು.
ಹುಕ್ಕೇರಿ:ಪಟ್ಟಣದ ನಿವಾಸಿಗಳ ಹಲವು ದಿನಗಳ ಕನಸಾಗಿದ್ದ ಹಳೆ ಬಸ್ ನಿಲ್ದಾಣ ಬಳಿಯ ಲೆಂಡೂರಿ ನಾಲದ ಸೇತುವೆ ಎತ್ತರಿಸುವ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ಶಾಸಕ ನಿಖಿಲ ಕತ್ತಿ ಹೇಳಿದರು.
ಅವರು ಸೋಮವಾರದಂದು ಪುರಸಭೆ ಕಾರ್ಯಾಲಯ ಎದುರಿಗೆ 1.10 ಕೋಟಿ ರೂ ವೆಚ್ಚದ ನೂತನ ಸೇತುವೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಸೇತುವೆ ನಿರ್ಮಾಣ ಕಾಮಗಾರಿಯು ಗುಣಮಟ್ಟದಿಂದ ಕೂಡಿರಬೇಕೆಂದು ಗುತ್ತಿಗೆದಾರರಿಗೆ ತಿಳಿಸಿದರು. ಅವೈಜ್ಞಾನಿಕವಾಗಿ ಈ ಮೊದಲು ನಿರ್ಮಿಸಿದ ಸೇತುವೆಯಿಂದ ಈ ಭಾಗದ ಜನರ ಮನೆ ಮತ್ತು ಅಂಗಡಿಗಳಿಗೆ ನುಗ್ಗಿ ಹಲವಾರು ಆವಾಂತರ ಸೃಷ್ಟಿಸುತ್ತಿತ್ತು. ಅದಕ್ಕಾಗಿ ಸೇತುವೆ ಎತ್ತರ ಹೆಚ್ಚಿಸಲು ಮತ್ತು ನಾಲ ನೀರು ಸರಾಗವಾಗಿ ಸಾಗುವಂತೆ ಕ್ರಮ ಕೈಗೊಳ್ಳಲು ಪುರವಾಸಿಗಳು ಆಗ್ರಹಿಸಿದ್ದರು. ಅವರ ಆ ಮನವಿಗೆ ಸ್ಪಂದಿಸಿ ಎಸ್.ಎಫ್.ಸಿ ವಿಶೇಷ ಅನುದಾನದಿಂದ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದರು. ಪಟ್ಟಣದ ಸಮಗ್ರ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಪುರಸಭೆಗೆ ಖರೀದಿಸಿದ ನೂತನ ಟ್ರ್ಯಾಕ್ಟರ, ವಿಕಲಚೇತನರಿಗೆ ಬ್ಯಾಟರಿ ಚಾಲಿತ ತ್ರಿಚಕ್ರ ವಾಹನ, ಬಡ ವಿದ್ಯಾರ್ಥಿಗಳಿಗೆ ಸಹಾಯಧನ ವಿತರಿಸಿದರು.

ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಅಧ್ಯಕ್ಷ ಮಹಾವೀರ ನಿಲಜಗಿ, ನಿರ್ದೇಶಕರಾದ ಸತ್ತೆಪ್ಪಾ ನಾಯಿಕ, ಕಲಗೌಡ ಪಾಟೀಲ, ಪುರಸಭೆ ಅಧ್ಯಕ್ಷ ಇಮ್ರಾನ್ ಮೋಮಿನ, ಉಪಾಧ್ಯಕ್ಷೆ ಜ್ಯೋತಿ ಬಡಿಗೇರ, ಸಾಯಿ ಸಮಿತಿ ಅಧ್ಯಕ್ಷ ಮಹಾಂತೇಶ ತಳವಾರ ಮತ್ತು ಸದಸ್ಯರು, ಮುಖಂಡರಾದ ಮಹಾನಿಂಗ ಸನದಿ, ಗುರು ಕುಲಕರ್ಣಿ, ಶೀತಲ ಬ್ಯಾಳಿ, ಎ.ಕೆ.ಪಾಟೀಲ, ರವಿ ಪಾಟೀಲ, ರವಿ ನಾಯಿಕ, ಪಾಂಡುರಂಗ ಖೋತ, ಮಲ್ಲಪ್ಪ ಬಿಸಿರೊಟ್ಟಿ, ಮಹೇಶ ಬಡಗಾಂವಿ, ಮತ್ತು ಅಧಿಕಾರಿಗಳಿದ್ದರು.






