ಸ್ಥಳೀಯ ವಿದ್ಯುತ್ ಸಹಕಾರಿ ಸಂಘದ ಕಾರ್ಯಾಲಯದಲ್ಲಿ ಆಡಳಿತ ಮಂಡಳಿ ನೂತನ ಅಧ್ಯಕ್ಷ, ಉಪಾಧ್ಯಕ್ಷರಾಯ್ಕೆ ಪ್ರಕ್ರಿಯೆಯಲ್ಲಿ ಮಾಜಿ ಸಂಸದ ರಮೇಶ ಕತ್ತಿ ಪಾಲ್ಗೊಂಡರು. ಮಹಾವೀರ ನಿಲಜಗಿ, ಲಕ್ಷ್ಮಣ ಮುನ್ನೋಳಿ, ಪೃಥ್ವಿ ಕತ್ತಿ , ವಿನಯಗೌಡ ಪಾಟೀಲ, ಕಲಗೌಡ ಪಾಟೀಲ, ಸತ್ತೆಪ್ಪಾ ನಾಯಿಕ, ಗಜಾನನ ಕೊಳ್ಳಿ ಇತರರಿದ್ದರು.
ಹುಕ್ಕೇರಿ: ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಮಹಾವೀರ ನಿಲಜಗಿ, ಉಪಾಧ್ಯಕ್ಷರಾಗಿ ಲಕ್ಷ್ಮಣ (ಅಜಿತ) ಮುನ್ನೋಳಿ ಅವರು ಅವಿರೋಧ ಆಯ್ಕೆಯಾದರು.
ಬುಧವಾರದಂದು ನಡೆದ ಆಡಳಿತ ಮಂಡಳಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಮಹಾವೀರ ನಿಲಜಗಿ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಲಕ್ಷ್ಮಣ (ಅಜಿತ) ಮುನ್ನೋಳಿ ಅವರು ನಾಮಪತ್ರ ಸಲ್ಲಿಸಿದರು. ಇವರಿಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಇವರು ಅವಿರೋಧವಾಗಿ ಆಯ್ಕೆಯಾದರೆಂದು ಸಹಾಯಕ ಚುನಾವಣಾಧಿಕಾರಿಗಳಾದ ಗಿರೀಶ ಯಾವಗಲ, ನವೀನ ಹುಲಕುಂದ ಅವರು ಘೋಷಿಸಿದರು.

ರಾಜ್ಯದ ಗಮನ ಸೆಳೆದಿದ್ದ ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘದ ಆಡಳಿತ ಮಂಡಳಿ ಚುನಾವಣೆಯಲ್ಲಿ ಮಾಜಿ ಸಂಸದ ರಮೇಶ ಕತ್ತಿ, ಶಾಸಕ ನಿಖಿಲ ಕತ್ತಿ ಮತ್ತು ಮಾಜಿ ಸಚಿವ ಎ.ಬಿ.ಪಾಟೀಲರ ನೇತೃತ್ವದ ಸ್ವಾಭಿಮಾನಿ ಪೆನೆಲ್ನ ಎಲ್ಲ ಅಭ್ಯರ್ಥಿಗಳು ಕ್ಲೀನ್ ಸ್ವೀಪ್ ಮಾಡುವ ಮೂಲಕ ಮೇಲುಗೈ ಸಾಧಿಸಿದರು.
ಸಹಕಾರಿ ವಲಯದಲ್ಲಿ ಪ್ರತಿಷ್ಟೆಯಾಗಿ ಪರಿಣಿಮಿಸಿದ ಈ ಚುನಾವಣೆ ಮುಂಬರುವ ದಿನಗಳಲ್ಲಿ ಜಿಲ್ಲಾ ರಾಜಕೀಯದಲ್ಲೂ ಬದಲಾವಣೆ ಪರ್ವಕ್ಕೆ ಮುನ್ನಡೆಯಾಗಬಹುದು ಎಂದು ಪ್ರಜ್ಞಾವಂತರ ಹಾಗೂ ಸಹಕಾರಿ ಮುಖಂಡರ ಅಭಿಮತವಾಗಿದೆ.
ಅಧ್ಯಕ್ಷ ಮಹಾವೀರ ನಿಲಜಗಿ ಮತ್ತು ಉಪಾಧ್ಯಕ್ಷ ಲಕ್ಷ್ಮಣ ಮುನ್ನೋಳಿ ಅವರು ಮಾತನಾಡಿ ಮಾಜಿ ಸಂಸದ ರಮೇಶ ಕತ್ತಿ, ಮಾಜಿ ಸಚಿವ ಎ.ಬಿ.ಪಾಟೀಲ, ಶಾಸಕ ನಿಖಿಲ ಕತ್ತಿ ಅವರು ಹಾಗೂ ಎಲ್ಲ ನಿರ್ದೇಶಕರು ನಮ್ಮನ್ನು ಅವಿರೋಧವಾಗಿ ಮಾಡಿದ್ದಕ್ಕೆ ಹೃದಯಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ ಎಂದರು. ಹಿರಿಯ ಸಹಕಾರಿಗಳ ಮಾರ್ಗದರ್ಶನ ಹಾಗೂ ಆಡಳಿತ ಮಂಡಳಿ ಸಹಕಾರದೊಂದಿಗೆ ಸಂಘದ ಸದಸ್ಯರ , ಗ್ರಾಹಕರ ನಿರೀಕ್ಷೆಗೆ ತಕ್ಕಂತೆ ಅಭಿವೃದ್ಧಿಗೆ ಶ್ರಮಿಸುತ್ತೇವೆ ಎಂದರು.
ನಿರ್ದೇಶಕರಾದ ಪೃಥ್ವಿ ಕತ್ತಿ ಮತ್ತು ವಿನಯಗೌಡ ಪಾಟೀಲ ಅವರು ಮಾತನಾಡಿ ತೋಟಪಟ್ಟಿಯ 15 ಸಾವಿರ ಕುಟುಂಬಗಳಿಗೆ ನಿರಂತರ ಜ್ಯೋತಿ ಸಂಪರ್ಕ ಕಲ್ಪಿಸುವುದೇ ನಮ್ಮ ಮೊದಲ ಕರ್ತವ್ಯ. ದಿನಕ್ಕೆ 20 ಟಿ.ಸಿ (ವಿದ್ಯುತ್ ಪರಿವರ್ತಕ)ಗಳನ್ನು ತಯಾರಿಸುವ ಗುರಿ ಹಮ್ಮಿಕೊಂಡಿದ್ದೇವೆ. ತಾಲೂಕಿನ ಜನರ ಸ್ವಾಭಿಮಾನಕ್ಕೆ ಗೌರವಿಸುವಂತೆ ಆಡಳಿತ ನಿರ್ವಹಿಸುತ್ತೇವೆ ಎಂದರು.
ಇದೇ ಸಂದರ್ಭದಲ್ಲಿ ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಮುಖಂಡರು, ಅಭಿಮಾನಿಗಳು ಸನ್ಮಾನಿಸಿದರು.

ಸಂಘದ ವ್ಯವಸ್ಥಾಪಕ ನಿರ್ದೆಶಕ ರವಿ ಪಾಟೀಲ, ರೆಸಿಡೆಂಟ್ ಇಂಜನೀಯರ ನೇಮಿನಾಥ ಖೆಮಲಾಪುರೆ, ಪ್ರಭಾರಿ ವ್ಯವಸ್ಥಾಪಕ ದುರದುಂಡಿ ನಾಯಿಕ ಮತ್ತು ನಿರ್ದೇಶಕರು, ಬಿಜೆಪಿ ಮಂಡಲ ಅಧ್ಯಕ್ಷ ರಾಚಯ್ಯಾ ಹಿರೇಮಠ, ಕಾರ್ಯದರ್ಶಿ ಶೀತಲ ಬ್ಯಾಳಿ, ಬೆಮುಲ್ ನಿರ್ದೇಶಕ ರಾಯಪ್ಪಾ ಡೂಗ, ಮುಖಂಡರಾದ ಗುರುರಾಜ ಕುಲಕರ್ಣಿ, ಎ.ಕೆ.ಪಾಟೀಲ, ಬಸವರಾಜ ಹುಂದ್ರಿ, ಸುನೀಲ ಪರ್ವತರಾವ, ರೋಹನ ನೇಸರಿ, ಶ್ರೀಶೈಲ ಯಮಕನಮರ್ಡಿ, ದುರದುಂಡಿ ಪಾಟೀಲ, ಕೆಂಪಣ್ಣಾ ದೇಸಾಯಿ, ಶ್ರೀಶೈಲ ಮಠಪತಿ, ಎಸ್.ಆರ್.ಕರ್ಕಿನಾಯಿಕ, ಅಶೋಕ ಪಾಟೀಲ, ರವಿ ಪರಕನಟ್ಟಿ, ಸುಹಾಸ ನೂಲಿ, ಚನ್ನಪ್ಪಾ ಗಜಬರ, ರಾಜು ಮುನ್ನೋಳಿ, ಸುರೇಶ ತೇರಣಿ ಇತರರಿದ್ದರು.





