ಸ್ಥಳೀಯ ಬಸವೇಶ್ವರ ವೃತ್ತದಲ್ಲಿ ಜೈನ ಸಮಾಜ ತಾಲೂಕಾಧ್ಯಕ್ಷ ಬಾಹುಬಲಿ ನಾಗನೂರಿ ಪ್ರತಿಭಟನಾ ಮನವಿ ಓದುತ್ತಿರುವುದು. ನಿಡಸೋಸಿ, ಕ್ಯಾರಗುಡ್ಡ, ಹತ್ತರಗಿ ಮಠದ ಸ್ವಾಮೀಜಿಗಳು, ಪೃಥ್ವಿ ಕತ್ತಿ, ಮಹಾವೀರ ನಿಲಜಗಿ, ಸತ್ತೆಪ್ಪಾ ನಾಯಿಕ ಇತರರಿದ್ದರು.
ಹುಕ್ಕೇರಿ: ಧರ್ಮದಿಂದ ಕೂಡಿರುವ ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮಾಡುವುದರ ಜತೆಗೆ ಸೋಶಿಯಲ್ ಮೀಡಿಯಾ ಮುಖಾಂತರ ಸುಳ್ಳು ಸುದ್ದಿಗಳನ್ನು ಹರಡಿಸುವಲ್ಲಿ ಕೆಲವರು ನಿರತರಾಗಿದ್ದಾರೆ, ಅವರ ಕೃತ್ಯದಿಂದ ಭಕ್ತ ವೃಂದಕ್ಕೆ ಹಾಗೂ ಅಭಿಮಾನಿ ಬಳಗಕ್ಕೆ ಆಘಾತ ಉಂಟುಮಾಡಿದೆ ಎಂದು ಜಗದ್ಗುರು ಡಾ.ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳು ಹೇಳಿದರು.

ಮಂಗಳವಾರದಂದು ಸ್ಥಳೀಯ ಬಸವೇಶ್ವರ ವೃತ್ತದಲ್ಲಿ ಹಿಂದೂಪರ ಸಂಘಟನೆಗಳಿಂದ ನಡೆದ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿದರು. ಸರ್ವ ಜನಾಂಗಗಳ ಶಾಂತಿಯ ತೋಟದಂತಿರುವ ಶ್ರೀ ಕ್ಷೇತ್ರದ ತೇಜೋವದೆ ಮಾಡುವ ದುರುದ್ದೇಶದಿಂದ ಅಂತಹ ಕೃತ್ಯ ಮಾಡುತ್ತಿದ್ದಾರೆ. ಸಮಾಜದ ಸಾಮರಸ್ಯವನ್ನು ಹಾಳು ಮಾಡುವ ಮುಖಾಂತರ ಸಮಾಜದಲ್ಲಿ ಅಶಾಂತಿ ನಿರ್ಮಾಣ ಮಾಡುವ ದುರುದ್ದೇಶದಿಂದ ಕೆಲವರು ದುಷ್ಟ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕಾರಣ ಇವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದರು.
ವಿದ್ಯುತ್ ಸಹಕಾರಿ ಸಂಘದ ನಿರ್ದೇಶಕ ಪೃಥ್ವಿ ಕತ್ತಿ, ಮಹಾವೀರ ಉದ್ಯೋಗ ಸಮೂಹ ಸಂಸ್ಥೆಯ ಮಹಾವೀರ ನಿಲಜಗಿ, ಶ್ರೀಪಾದ ಮುನ್ನೋಳಿ, ಜೈನ ಸಮಾಜದ ತಾಲೂಕಾಧ್ಯಕ್ಷ ಬಾಹುಬಲಿ ನಾಗನೂರಿ, ವಕೀಲ ರಾಮಚಂದ್ರ ಜೋಶಿ ಮಾತನಾಡಿ ಧರ್ಮಕ್ಷೇತ್ರಕ್ಕೆ ಕಳಂಕ ಮೆತ್ತಲು ನಡೆದ ಷಡ್ಯಂತ್ರ ಇದಾಗಿದೆ. ಕಾರಣ ಎಸ್.ಐ.ಟಿ ರದ್ದುಗೊಳಿಸಿ, ಈ ದುಷ್ಕೃತ್ಯದ ಹಿಂದೆ ಇರುವವರನ್ನು ತಕ್ಷಣ ಬಂಧಿಸಿ ಅವರ ಮೇಲೆ ಯೋಗ್ಯ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.
ಪ್ರಾರಂಭದಲ್ಲಿ ಅಡವಿಸಿದ್ದೇಶ್ವರ ಮಠದ ಬಳಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು ಮೆರವಣಿಗೆಗೆ ಚಾಲನೆ ನೀಡಿದರು. ಹತ್ತರಗಿ ಕಾರಿಮಠದ ಗುರುಸಿದ್ದೇಶ್ವರ ಮಹಾಸ್ವಾಮಿಗಳು, ಅಭಿನವ ಮಂಜುನಾಥ ಶ್ರೀಗಳು ಮಾತನಾಡಿದರು. ನಂತರ ಬಸ್ ನಿಲ್ದಾಣ ಮೂಲಕ ಬಸವೇಶ್ವರ ವೃತ್ತದ ಮೆರವಣಿಗೆ ನಡೆದು ಅಲ್ಲಿ ಮಾನವ ಸರಪಳಿ ಮೂಲಕ ರಸ್ತೆ ತಡೆ ನಡೆಸಿದರು. ನಂತರ ತಹಸೀಲ್ದಾರ ಬಲರಾಮ ಕಟ್ಟಿಮನಿ ಅವರಿಗೆ ಪ್ರತಿಭಟನಾ ಮನವಿ ಸಲ್ಲಿಸಿದರು.

ವಕೀಲರ ಸಂಘದ ಅಧ್ಯಕ್ಷ ಕೆ.ಬಿ.ಕುರಬೇಟ, ಮಾಜಿ ಅಧ್ಯಕ್ಷ ರಾಜೀವ ಚೌಗಲಾ, ವಿ.ಎಚ್.ಪಿ ತಾಲೂಕಾಧ್ಯಕ್ಷ ಶಿವರಾಜ ನಾಯಿಕ, ಜನ ಜಾಗ್ರತಿ ವೇದಿಕೆ ಜಿಲ್ಲಾಧ್ಯಕ್ಷ ಶ್ರೀಪಾದ ಮುನ್ನೋಳಿ, ಮುಖಂಡರಾದ ಸತ್ತೆಪ್ಪಾ ನಾಯಿಕ, ಗುರು ಕುಲಕರ್ಣಿ, ಎ.ಕೆ.ಪಾಟೀಲ, ಅಶೋಕ ಪಾಟೀಲ, ಪ್ರಜ್ವಲ ನಿಲಜಗಿ, ದಯಾನಂದ ಅಮ್ಮಣಗಿ, ಪ್ರಭು ವಂಟಮೂರಿ, ರಾಹುಲ ಖೇಮಲಾಪೂರೆ, ಸಂಜಯ ಅಡಕೆ, ರಮೇಶ ಹುಂಜಿ, ಪ್ರಕಾಶ ಪಾಟೀಲ, ಬಾಹುಬಲಿ ಸೊಲ್ಲಾಪೂರೆ, ರಾಜು ಕೋಟಿಮನಿ, ಶಾಂತಿನಾಥ ಪಾಟೀಲ, ವಿದ್ಯಾಧರ ಹರಾರಿ, ಕಾಡಪ್ಪಾ ಮಗದುಮ್ಮ, ಆನಂದ ಲಕ್ಕುಂಡಿ, ಶಿವನಗೌಡ ಪಾಟೀಲ ಮತ್ತು ಸ್ವಸಹಾಯ ಸಂಘದ ಮಹಿಳೆಯರು ಸೇರಿದಂತೆ ಅನೇಕರಿದ್ದರು.





