ಬೆಲ್ಲದ ಬಾಗೇವಾಡಿಯಲ್ಲಿ ತಾಲೂಕಿನ ಶಿರಗಾಂವ ಗ್ರಾಮದ ಪಿಕೆಪಿಎಸ್ ನಂ.1 ರ ನೂತನ ಆಡಳಿತ ಮಂಡಳಿಯವರು ರಮೇಶ ಕತ್ತಿ ಅವರನ್ನು ಸನ್ಮಾನಿಸಿದರು. ರಾಜೇಶ ಬಿರಾದಾರಪಾಟೀಲ, ಬಸವರಾಜ ಘಟಿಗೆನ್ನವರ, ಮಲ್ಲಿಕಾರ್ಜುನ ತೇರಣಿ, ಆನಂದ ಸೋಮನ್ನವರ ಮತ್ತಿತರರಿದ್ದರು.
ಹುಕ್ಕೇರಿ: ರೈತರ ಆರ್ಥಿಕ ಜೀವನಾಡಿ ಆಗಿರುವ ಪಿಕೆಪಿಎಸ್ಗಳು ರಾಜಕೀಯ ರಹಿತವಾಗಿರಬೇಕು. ರಾಜಕೀಯ ಚುನಾವಣೆಗೆ ಮಾತ್ರ ಸೀಮಿತವಾಗಿರಬೇಕು. ಚುನಾವಣೆ ನಂತರ ಜಾತಿ ಮತ್ತು ಪಕ್ಷಾತೀತವಾಗಿ ಆಡಳಿತ ಮಂಡಳಿ ಕಾರ್ಯ ನಿರ್ವಹಿಸಬೇಕು ಎಂದು ಡಿಸಿಸಿ ಬ್ಯಾಂಕಿನ ನಿರ್ದೇಶಕ ರಮೇಶ ಕತ್ತಿ ಹೇಳಿದರು.
ಇತ್ತೀಚೆಗೆ ಅವಿರೋಧವಾಗಿ ಆಯ್ಕೆಯಾದ ತಾಲೂಕಿನ ಶಿರಗಾಂವ ಗ್ರಾಮದ ಪಿಕೆಪಿಎಸ್ ನಂ.1 ರ ನೂತನ ಆಡಳಿತ ಮಂಡಳಿಯವರಿಂದ ಸತ್ಕಾರ ಸ್ವೀಕರಿಸಿ ಬುಧವಾರದಂದು ಬೆಲ್ಲದ ಬಾಗೇವಾಡಿಯಲ್ಲಿ ಮಾತನಾಡಿದರು. ನಮ್ಮ ತಾಲೂಕಿನ ಸ್ವಾಭಿಮಾನಿ ಜನ ಸಹಕಾರಿ ಕ್ಷೇತ್ರವನ್ನು ಉಳಿಸಿ ಬೆಳೆಸಿದ್ದಾರೆ. ಇದನ್ನು ಆಡಳಿತ ಮಂಡಳಿಯವರು ಅರಿತುಕೊಂಡು ರೈತರ ಸೇವೆ ಮಾಡುವಂತೆ ಸಲಹೆ ನೀಡಿದರು.
ನಿಕಟಪೂರ್ವ ಅಧ್ಯಕ್ಷ ರಾಜೇಶ ಬಿರಾದಾರಪಾಟೀಲ ಮತ್ತು ನೂತನ ಅಧ್ಯಕ್ಷ ಬಸವರಾಜ ಘಟಿಗೆನ್ನವರ ಮಾತನಾಡಿ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಸಂಘದ ಸದಸ್ಯರ, ಹಿರಿಯರ ಹಾಗೂ ಡಿಸಿಸಿ ಬ್ಯಾಂಕ ನಿರ್ದೇಶಕ ರಮೇಶ ಕತ್ತಿ ಮತ್ತು ಶಾಸಕ ನಿಖಿಲ ಕತ್ತಿ ಅವರ ಮಾರ್ಗದರ್ಶನದಲ್ಲಿ ಅವಿರೋಧವಾಗಿ ಆಯ್ಕೆ ಜರುಗಿತು ಎಂದರು.
ಸಂಘದ ಅಧ್ಯಕ್ಷ ಬಸವರಾಜ ಘಟಿಗೆನ್ನವರ, ಉಪಾಧ್ಯಕ್ಷ ಮಲ್ಲಿಕಾರ್ಜುನ ತೇರಣಿ, ನಿರ್ದೇಶಕರಾದ ರಾಜೇಶ ಬಿರಾದಾರಪಾಟೀಲ, ಬಸವಣ್ಣಿ ಪಡೆಪ್ಪಗೋಳ, ಮಲ್ಲಿಕಾರ್ಜುನ ಖಾನಾಪೂರಿ, ಶಿವಾನಂದ ಮುನ್ನೋಳಿ, ಶಂಕರ ಪಾಟೀಲ, ಕೆಂಪಣ್ಣಾ ಶಿರಗಾಂವಕರ, ಇಂದುಮತಿ ಪಾಟೀಲ, ಕೆಂಪವ್ವಾ ಮಗದುಮ್ಮ, ಮಹಾದೇವಿ ಮುನ್ನೋಳಿ, ಮುಖಂಡರಾದ ಸುರೇಶ ತೇರಣಿ, ಆನಂದ ಸೋಮನ್ನವರ, ಸಿಇಒ ಕಾಡಪ್ಪಾ ನಿಡಸೋಸಿ ಇತರರಿದ್ದರು.





