ಹುಕ್ಕೇರಿ ಪಟ್ಟಣದ ಗ್ರಾಮದೇವತೆ ಜಾತ್ರಾ ಮಹೋತ್ಸವ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷ ಭಾಪುಸಾಹೇಬ ನಾಯಿಕ ಮಾತನಾಡಿದರು. ಮಹಾವೀರ ನಿಲಜಗಿ, ಎ.ಕೆ.ಪಾಟೀಲ, ಉದಯ ಹುಕ್ಕೇರಿ, ಜಯಗೌಡ ಪಾಟೀಲ ಇತರರಿದ್ದರು.
ಹುಕ್ಕೇರಿ:ಪಟ್ಟಣದ ಗ್ರಾಮದೇವತೆ ಲಕ್ಷ್ಮೀದೇವಿಯ ಜಾತ್ರಾ ಮಹೋತ್ಸವ ಶ್ರದ್ಧಾ ಭಕ್ತಿಯಿಂದ ನಡೆಸಲು ಪಟ್ಟಣವಾಸಿಗಳು ನಿರ್ಧರಿಸಿದರು. ಮೂರು ವರ್ಷಕ್ಕೊಮ್ಮೆ ಜರುಗುವ ಜಾತ್ರಾ ಮಹೋತ್ಸವ ಕೋಮು ಸೌಹಾರ್ದತೆಗೆ ಹೆಸರಾಗಿದೆ. ಕಾರಣ ಎಂದಿನಂತೆ ವಿಜೃಂಭಣೆಯಿಂದ ಆಚರಿಸಲು ಪೂರ್ವಭಾವಿ ಸಭೆಯಲ್ಲಿ ಮಹೋತ್ಸವ ಸಮಿತಿಯವರು ನಿರ್ಣಯಿಸಿದರು.
ಬುಧವಾರದಂದು ಪಟ್ಟಣದ ಲಕ್ಷ್ಮೀದೇವಿ ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವ ಸಮಿತಿಯವರಿಂದ ಪೂರ್ವಭಾವಿ ಸಭೆ ಜರುಗಿತು. ಸಭೆಯಲ್ಲಿ ಸರ್ವಧರ್ಮೀಯರು ಕೂಡಿ ಆಚರಿಸುವ ಈ ಜಾತ್ರಾ ಮಹೋತ್ಸವವನ್ನು ಮಾರ್ಚ್ ತಿಂಗಳ ದಿ. 10 ರಿಂದ 14ರ ವರೆಗೆ ಆಚರಿಸಲು ಸಮಿತಿ ಸದಸ್ಯರು ಮತ್ತು ಭಕ್ತಾಧಿಗಳು ತೀರ್ಮಾನಿಸಿದರು.
ಸನ್ 2026 ಮಾರ್ಚ್ ದಿ. 6 ರಂದು ಶ್ರೀಫಲ ಪೂಜಿಸುವುದರ ಜತೆಗೆ ದೇವಿಯ ಕೋಣದ ಮೆರವಣಿಗೆ ಮೂಲಕ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಅದೇ ದಿನ ರಾತ್ರಿ ಹೊನ್ನಾಟ ಜರುಗಲಿದೆ ಹೊನ್ನಾಟದಲ್ಲಿ ಗುಲಾಲ್ ಎರಚುವುದು ವಾಡಿಕೆಯಾದರೆ, ಉಳಿದ ನಾಲ್ಕು ದಿನ ಭಂಡಾರದ ಜಾತ್ರೆ ಆಗಿರುತ್ತದೆ. ಜಾತ್ರಾ ಮಹೋತ್ಸವ ಚೆನ್ನಾಗಿ ನಡೆಯಲು ಪಟ್ಟಣವಾಸಿಗಳು ಸಹಕರಿಸಬೇಕೆಂದು ಸಮಿತಿಯವರು ಕೇಳಿಕೊಂಡರು.
ಮುಖಂಡರಾದ ಸಂಜು ಮುತಾಲಿಕ, ಗುರು ಕುಲಕರ್ಣಿ, ರವಿ ಕರಾಳೆ, ರವಿ ಪರಕನಟ್ಟಿ, ಶಿವಾನಂದ ಗಜಬರ, ಶಿವರಾಜ ನಾಯಿಕ, ರಾಜು ಮುನ್ನೋಳಿ, ಚಂದ್ರಶೇಖರ ಗಂಗಣ್ಣವರ, ಸುರೇಶ ಜಿನರಾಳಿ, ಮತ್ತಿತರರು ಮಾತನಾಡಿ ಜಾತ್ರೆಯ ಪ್ರಾರಂಭಕ್ಕಿಂತ ಮುಂಚೆ ಪಟ್ಟಣದಲ್ಲಿ ನಡೆಯುತ್ತಿರುವ ಒಳಚರಂಡಿ ವ್ಯವಸ್ಥೆಯಿಂದ ರಸ್ತೆ ಅಗೆತ ಉಂಟಾಗಿ ಜನ ಸಂಚಾರಕ್ಕೆ ಪರದಾಡುವಂತಾಗಿದೆ. ರಸ್ತೆಗಳ ದುರವಸ್ಥೆ ಸರಿಪಡಿಸದೇ ಜಾತ್ರೆ ಮಾಡಲು ಆಗದು ಎಂದು ತಿಳಿಸಿದರು. ಜಾತ್ರೆಗೆ ಆಗಮಿಸುವ ಲಕ್ಷಾಂತರ ಭಕ್ತಾದಿಗಳಿಗೆ ಸುಲಭ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ವಿದ್ಯುತ್ ಸಮಸ್ಯೆ ತಲೆದೋರದಂತೆ ಕ್ರಮ ಕೈಗೊಳ್ಳಬೇಕೆಂದು ಪ್ರಸ್ತಾಪಿಸಿದರು. ಇದಕುತ್ತರಿಸಿದ ಸಮಿತಿ ಅಧ್ಯಕ್ಷ ಭಾಪುಸಾಹೇಬ ನಾಯಿಕ ಅವರು ಪಟ್ಟಣದ ಜತೆಗೆ ಪರ ಊರುಗಳಿಂದ ಲಕ್ಷಾಂತರ ಭಕ್ತಾಧಿಗಳು ಆಗಮಿಸುತ್ತಾರೆ. ಅವರಿಗೆ ಯಾವ ಸಮಸ್ಯೆ ಆಗದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳುತ್ತೇವೆ. ಜಾತ್ರೆ ಯಶಸ್ಸಿಗಾಗಿ ಶಾಸಕರ ನೇತೃತ್ವದಲ್ಲಿ ತಾಲೂಕಾಡಳಿತದ ಎಲ್ಲ ಅಧಿಕಾರಿಗಳ ಸಭೆ ಕರೆದು ಚರ್ಚಿಸುತ್ತೇವೆ ಎಂದರು.
ಜಾತ್ರಾ ಮಹೋತ್ಸವ ಸಮಿತಿ ಹಕ್ಕುದಾರರಾದ ರಾಜೇಶ ಕುಲಕರ್ಣಿ, ವಿನೋದ ಮುತಾಲಿಕ, ರಾಜು ಕೊಟಬಾಗಿ, ರವೀಂದ್ರ ನಾಯಿಕ, ಪಿಂಟು(ಸಿ.ಆರ್.) ಶೆಟ್ಟಿ, ಚಂದ್ರಶೇಖರ ಮಲಕಾಯಿ, ಚಿದಾನಂದ ಬಸ್ತವಾಡೆ, ರುದ್ರಗೌಡ ಪಾಟೀಲ, ಶಿವಗೌಡ ಪಾಟೀಲ, ಗಿರೀಶ ಕುಲಕರ್ಣಿ, ಬಸಗೌಡ ಪಾಟೀಲ, ಶಿವಾನಂದ ಮುದಕಣ್ಣವರ, ಭೀಮಾನಂದ ಮುದಕಣ್ಣವರ, ವಿದ್ಯುತ್ ಸಹಕಾರಿ ಸಂಘದ ಅಧ್ಯಕ್ಷ ಮಹಾವೀರ ನಿಲಜಗಿ, ಪುರಸಭೆ ಮಾಜಿ ಅಧ್ಯಕ್ಷರಾದ ಎ.ಕೆ.ಪಾಟೀಲ, ಜಯಗೌಡ ಪಾಟೀಲ, ಅಪ್ಪುಸ್ ತುಬಚಿ, ಉದಯ ಹುಕ್ಕೇರಿ ಸೇರಿದಂತೆ ಅನೇಕರಿದ್ದರು.




