ಸ್ಥಳೀಯ ಹಿರೇಮಠದಲ್ಲಿ ಮೈಸೂರಿನ ಮಹಾರಾಜರು, ಸಂಸದರಾದ ಯದುವೀರ ಒಡೆಯರು ಅವರನ್ನು ಸತ್ಕರಿಸಿದರು.ಚಂದ್ರಶೇಖರ ಶಿವಾಚಾರ್ಯರು, ಮಹಾವೀರ ನಿಲಜಗಿ, ಪೃಥ್ವಿ ಕತ್ತಿ, ಸುನೀಲ ಪರ್ವತರಾವ, ಪ್ರಭು ವಂಟಮೂರೆ ಇತರರಿದ್ದರು.
ಹುಕ್ಕೇರಿ: ಮೈಸೂರು ಅರಮನೆಗೂ ಹುಕ್ಕೇರಿ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠಕ್ಕೂ ಅವಿನಾಭವ ಸಂಬಂಧ. ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳವರು ಹುಕ್ಕೇರಿಯ ಮಠಾಧಿಪತಿಗಳು ಆಗಿದ್ದರೂ ಮೈಸೂರಿನ ಸಂಸ್ಕೃತಿಯನ್ನು ಉತ್ತರ ಕರ್ನಾಟಕಕ್ಕೆ ಪರಿಚಯಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ ಎಂದು ಮೈಸೂರಿನ ಮಹಾರಾಜರು ಮೈಸೂರು ಕೊಡಗು ಕ್ಷೇತ್ರದ ಸಂಸದರು ಆದ ಯದವೀರ ಕೃಷ್ಣ ದತ್ತ ಚಾಮರಾಜ ಒಡೆಯರು ಹೇಳಿದರು.
ಅವರು ಶನಿವಾರದಂದು ಸ್ಥಳೀಯ ಹುಕ್ಕೇರೀಶರ ಉತ್ಸವದಲ್ಲಿ ಪಾಲ್ಗೊಂಡು ಶ್ರೀಮಠದಿಂದ ಸತ್ಕಾರ ಸ್ವೀಕರಿಸಿ ಮಾತನಾಡಿದರು. ಮೈಸೂರು ದಸರಾ ಇಡೀ ವಿಶ್ವಕ್ಕೆ ಹೆಸರಾಗಿದ್ದರೆ, ಹುಕ್ಕೇರಿ ಹಿರೇಮಠದ ದಸರಾ ಸಾಮರಸ್ಯ ಮತ್ತು ಭಾವೈಕ್ಯತೆಗೆ ಹೆಸರಾಗಿರುವುದು ಅಭಿಮಾನದ ಸಂಗತಿ. ಹುಕ್ಕೇರಿಯಲ್ಲಿ ವೇದ, ಸಂಸ್ಕೃತ, ಕನ್ನಡ ಅಭಿಮಾನ ಮತ್ತು ದಾಸೋಹ ಕಾರ್ಯವನ್ನು ಮಾಡುವುದರೊಂದಿಗೆ ಎಲ್ಲರ ಮನವನ್ನು ಗೆದ್ದಿದೆ ಎಂದರು.

ಮೈಸೂರಿನ ಮಹಾರಾಜರನ್ನು ಹುಕ್ಕೇರಿ ಹಿರೇಮಠದಿಂದ ಗೌರವಿಸಿ ಮಾತನಾಡಿದ ಚಂದ್ರಶೇಖರ ಶಿವಾಚಾರ್ಯರು ಮೈಸೂರಿನ ಮಹಾರಾಜರು ನಾಡಿಗಾಗಿ ಸಾಕಷ್ಟು ತ್ಯಾಗವನ್ನು ಮಾಡಿದ್ದಾರೆ. ಮೈಸೂರಿನ ದೊರೆ ಕೇವಲ ಮೈಸೂರಿಗೆ ಅಷ್ಟೇ ಮಾತ್ರ ಸೀಮಿತವಾಗಿಲ್ಲ, ಇಡೀ ಕರುನಾಡಿನ ದೊರೆ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರು ಹುಕ್ಕೇರಿಗೆ ಆಗಮಿಸಬೇಕೆಂಬ ಬಹಳ ದಿನದ ಕನಸು ನನಸಾಗಿದೆ. ಯದುವೀರ ಒಡೆಯರು ಹುಕ್ಕೇರಿ ಹಿರೇಮಠಕ್ಕೆ ಆಗಮಿಸಿ ಗುರುಶಾಂತೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದಿರುವುದು ನಿಜಕ್ಕೂ ಅಭಿನಂದನೀಯ ಎಂದರು.
ಇದಕ್ಕೂ ಪೂರ್ವದಲ್ಲಿ ನಡೆದ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಡಿಸಿಸಿ ಬ್ಯಾಂಕ ನಿರ್ದೇಶಕ, ಮಾಜಿ ಸಂಸದ ರಮೇಶ ಕತ್ತಿ ಅವರು ಶ್ರೀಗಳು ಸನಾತನ ಹಿಂದೂ ಧರ್ಮವನ್ನು ಉಳಿಸಿ ಬೆಳೆಸುವಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದಾರೆ. ವೀರಶೈವ ಲಿಂಗಾಯತ ಧರ್ಮದ ಐಕ್ಯತೆಗೆ ಶ್ರಮಿಸಬೇಕೆಂದರು. ಇದೇ ಸಂದರ್ಭದಲ್ಲಿ ಸಾಧನಾ ಶ್ರೀ ಪ್ರಶಸ್ತಿ ಪುರಸ್ಕೃತರನ್ನು ಸತ್ಕರಿಸಿದರು.

ಡಾ. ಮಹಾಂತೇಶ ಶಾಸ್ತ್ರೀಗಳು, ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಅಧ್ಯಕ್ಷ ಮಹಾವೀರ ನಿಲಜಿಗಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿದ್ಯುತ್ ಸಹಕಾರಿ ಸಂಘದ ನಿರ್ದೇಶಕರಾದ ಪೃಥ್ವ್ವಿ ಕತ್ತಿ, ಗಜಾನನ ಕೊಳ್ಳಿ, ಸತ್ತೆಪ್ಪಾ ನಾಯಿಕ, ನಂದು ಮುಡಸಿ, ರೆಸಿಡೆಂಟ ಇಂಜನೀಯರ ನೇಮಿನಾಥ ಖೇಮಲಾಪೂರೆ, ಮುಖಂಡರಾದ ಶ್ರೀಶೈಲ ವರ್ಜಿ, ರಾಯಪ್ಪಾ ಡೂಗ, ಅಶೋಕ ಪಾಟೀಲ, ಸುನೀಲ ಪರ್ವತರಾವ, ರೋಹನ ನೇಸರಿ, ಗುರುರಾಜ ಕುಲಕರ್ಣಿ, ಪ್ರಭು ವಂಟಮೂರೆ, ಶೀತಲ ಬ್ಯಾಳಿ, ಅನೀಲ ಶೆಟ್ಟಿ, ಚೆನ್ನಪ್ಪಾ ಗಜಬರ, ಸುಭಾಸ ನಾಯಿಕ, ಬಿ.ಇ.ಒ ಪ್ರಭಾವತಿ ಪಾಟೀಲ, ಸವಿತಾ ಹಲಕಿ, ಎ.ಎಸ್.ಪದ್ಮನ್ನವರ ಮತ್ತಿತರರಿದ್ದರು.





