ಸಂಕೇಶ್ವರ ಹಿರಾ ಶುಗರ್ಸ್ ನಲ್ಲಿ ಸುದ್ದಿಗರರೊಂದಿಗೆ ಮಾತನಾಡಿ ಮಾಜಿ ಸಚಿವ ಎ.ಬಿ.ಪಾಟೀಲ. ಮಾಜಿ ಸಂಸದ ರಮೇಶ ಕತ್ತಿ, ಶಾಸಕ ನಿಖಿಲ ಕತ್ತಿ ಮತ್ತಿತರರಿದ್ದರು.
ಹುಕ್ಕೇರಿ: ಸಹಕಾರ ಮಹರ್ಷಿ ದಿ.ಅಪ್ಪಣ್ಣಗೌಡರು ಸ್ಥಾಪಿಸಿದ ತಾಲೂಕಿನ ಹಲವಾರು ಸಂಘ ಸಂಸ್ಥೆಗಳಿಂದ ಕತ್ತಿ ಮತ್ತು ಪಾಟೀಲ ಕುಟುಂಬ ರಾಜಕೀಯವಾಗಿ ಉನ್ನತ ಸ್ಥಾನಮಾನ ಪಡೆದಿವೆ. ಅದರ ಋಣ ತೀರಿಸಲು ನಾವು ಒಂದಾಗಿರಬೇಕೆಂದು ತಾಲೂಕಿನ ಜನರ ಅಪೇಕ್ಷೆಯಂತೆ ಇಂದು ಒಟ್ಟಾಗಿ ಒಂದಾಗಿದ್ದೇವೆ. ಹಿರಾ ಶುಗರ್ಸ್ ಸಹಕಾರಿ ತತ್ವದಡಿ ಉಳಿಸಿ ಬೆಳೆಸುತ್ತೇವೆ ಎಂದು ಮಾಜಿ ಸಚಿವ ಎ.ಬಿ.ಪಾಟೀಲ ಹೇಳಿದರು.
ಅವರು ಸೋಮವಾರದಂದು ತಾಲೂಕಿನ ಸಂಕೇಶ್ವರ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರಖಾನೆ ಆವರಣದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಕಾರಖಾನೆಯನ್ನು ಲೀಸ್ ಕೊಡುವುದೋ ಅಥವಾ ಸಹಕಾರಿ ತತ್ವದಡಿ ನಡೆಸುವುದೋ ಎಂಬ ಭಿನ್ನಾಭಿಪ್ರಾಯದಿಂದ ನಿರ್ದೇಶಕರು ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರ ನೆರವು ಪಡೆದು ನಡೆಸಲು ಮುಂದಾಗಿದ್ದರು.ಆದರೆ ಜೊಲ್ಲೆ ಅವರು ನೀಡಿದ 100 ಕೋಟಿ ರೂ ಸಾಲದ ಬಡ್ಡಿ ಹೆಚ್ಚಿಸಿದ್ದರಿಂದ ನನ್ನ ಬಳಿ ಚರ್ಚಿಸಿದರು. ಆಗ ನಾನು ಮತ್ತು ನಿರ್ದೇಶಕರು ಮಾಜಿ ಸಂಸದ ರಮೇಶ ಕತ್ತಿ, ಶಾಸಕ ನಿಖಿಲ ಕತ್ತಿ ಅವರೊಂದಿಗೆ ಚರ್ಚಿಸಿ ಈ ಕಾರಖಾನೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಈ ಬೆಳವಣಿಗೆ ಆಗಿದೆ ಎಂದರು.
ಮಾಜಿ ಸಂಸದ ರಮೇಶ ಕತ್ತಿ ಮಾತನಾಡಿ ೩ ದಶಕಗಳಿಂದ ಮಾಜಿ ಸಚಿವ ಎ.ಬಿ.ಪಾಟೀಲ ಮತ್ತು ನಮ್ಮ ಕುಟುಂಬ ರಾಜಕೀಯವಾಗಿ ದೂರಾಗಿದ್ದೆವು. ಆದರೆ ನಮ್ಮೆರಡು ಕುಟುಂಬಗಳನ್ನು ಸಾಮಾಜಿಕ, ರಾಜಕೀಯವಾಗಿ ಬೆಳೆಸಿದ ಕಾರಖಾನೆ ಸಂಕಷ್ಟದಲ್ಲಿದ್ದಾಗ ನಾವು ಹಿರಿಯರ ಮತ್ತು ಹಿತೈಷಿಗಳ ಅಭಿಪ್ರಾಯದಂತೆ ಒಂದಾಗಿದ್ದೇವೆ. ನಾನು ಮತ್ತು ಎ.ಬಿ.ಪಾಟೀಲ ಇಬ್ಬರೂ ಕಾರಖಾನೆಯ ಯುವ ನಿರ್ದೇಶಕ ಮಂಡಳಿಗೆ ಮಾರ್ಗದರ್ಶನ ಮಾಡುತ್ತೇವೆ. ಜತೆಗೆ ಅದನ್ನು ಅಭಿವೃದ್ಧಿ ಪಡಿಸುತ್ತೇವೆ. ಇದಕ್ಕೆ ರೈತರ, ಕಾರ್ಮಿಕರ ಮತ್ತು ಸಹಕಾರಿಗಳ ಸಹಕಾರ ಅವಶ್ಯವೆಂದರು. ರಾಜಕೀಯವಾಗಿ ನಾವು ಬೇರೆ ಬೇರೆಯಾಗಿದ್ದರೂ ಸಹಕಾರಿ ಕ್ಷೇತ್ರದಲ್ಲಿ ಇನ್ನೂ ಮುಂದೆ ಒಂದಾಗಿ ಶ್ರಮಿಸುತ್ತೇವೆ.ಜತೆಗೆ ದಿ.ಅಪ್ಪಣ್ಣಗೌಡರ ಕನಸನ್ನು ನನಸು ಮಾಡುವುದಾಗಿ ತಿಳಿಸಿದರು.
ಹಿರಾ ಶುಗರ್ಸ್ ಅಧ್ಯಕ್ಷ ಅಜ್ಜಪ್ಪಾ ಕಲ್ಲಟ್ಟಿ ಮಾತನಾಡಿ ಜೊಲ್ಲೆಯವರು ನೀಡಿದ ಸಾಲಕ್ಕೆ ಶೇ.15 ರಷ್ಟು ಬಡ್ಡಿ ಆಕರಿಸಿದ್ದರಿಂದ ಅನಿವಾರ್ಯವಾಗಿ ಅವರಿಂದ ದೂರಾಗಿ ತಾಲೂಕಿನ ಹಿರಿಯ ಸಹಕಾರಿಗಳಾದ ಮಾಜಿ ಸಂಸದ ರಮೇಶ ಕತ್ತಿ ಮತ್ತು ಮಾಜಿ ಸಚಿವ ಎ.ಬಿ.ಪಾಟೀಲ ಅವರ ಮಾರ್ಗದರ್ಶನದಲ್ಲಿ ಕಾರಖಾನೆ ನಡೆಸುತ್ತೇವೆ ಎಂದು ಪತ್ರಕರ್ತರಿಗೆ ತಿಳಿಸಿದರು.
- ರಾಜಕೀಯದಲ್ಲಿ ಎ.ಬಿ.ಪಾಟೀಲರು ಕಾಂಗ್ರೆಸ್ ಪಕ್ಷಕ್ಕೆ ದುಡಿದರೆ ನಾವು ಬಿಜೆಪಿ ಪಕ್ಷಕ್ಕೆ ಶ್ರಮಿಸುತ್ತೇವೆ. ಆದರೆ ಸಹಕಾರಿ ಕ್ಷೇತ್ರ ಪಕ್ಷ, ಜಾತಿ ಮತ್ತು ರಾಜಕೀಯ ರಹಿತವಾಗಿದೆ. ಅದರಿಂದ ನಾವಿಬ್ಬರೂ ಸಹಕಾರ ಕ್ಷೇತ್ರದಲ್ಲಿ ಮಾತ್ರ ಒಂದಾಗಿದ್ದೇವೆ: ರಮೇಶ ಕತ್ತಿ ಮಾಜಿ ಸಂಸದರು.
ಪ್ರಾರಂಭದಲ್ಲಿ ಮಾಜಿ ಸಂಸದ ರಮೇಶ ಕತ್ತಿ ಮತ್ತು ಮಕ್ಕಳು, ಮಾಜಿ ಸಚಿವ ಎ.ಬಿ.ಪಾಟೀಲ ಮತ್ತು ಅವರ ಪುತ್ರ ಶಂಕರಲಿಂಗ ಮಠಕ್ಕೆ ತೆರಳಿ ಸಚ್ಚಿದಾನಂದ ಶ್ರೀಗಳ ಆಶೀರ್ವಾದ ಪಡೆದರು. ನಂತರ ಕಾರಖಾನೆಯಲ್ಲಿ ದಿ.ಅಪ್ಪಣ್ಣಗೌಡರ ಮತ್ತು ಬಸಗೌಡ ಪಾಟೀಲ ಅವರ ಪುತ್ಥಳಿಗಳಿಗೆ ಪೂಜೆ ಸಲ್ಲಿಸಿದರು.

ಶಾಸಕ ನಿಖಿಲ ಕತ್ತಿ, ಕಾರಖಾನೆ ಉಪಾಧ್ಯಕ್ಷ ಅಶೋಕ ಪಟ್ಟಣಶೆಟ್ಟಿ, ನಿರ್ದೇಶಕರು, ಮುಖಂಡರಾದ ಅಪ್ಪಾಸಾಹೇಬ ಶಿರಕೋಳಿ, ಗಜಾನನ ಕೊಳ್ಳಿ, ನ್ಯಾಯವಾದಿ ಆರ್.ಬಿ.ಪಾಟೀಲ, ರೋಹನ ನೇಸರಿ, ಸುನೀಲ ಪರ್ವತರಾವ, ಸತ್ಯೆಪ್ಪಾ ನಾಯಿಕ, ಪೃಥ್ವಿ ಕತ್ತಿ, ಪವನ ಕತ್ತಿ, ವಿನಯಕುಮಾರ ಪಾಟೀಲ, ಗುರು ಕುಲಕರ್ಣಿ, ಶೀತಲ ಬ್ಯಾಳಿ, ನಂದು ಮುಡಸಿ, ಗುಂಡು ಪಾಟೀಲ, ಭೀಮಪ್ಪಾ ಚೌಗಲಾ ಸೇರಿದಂತೆ ಅನೇಕರಿದ್ದರು.






