ಪಟ್ಟಣದ ಎಸ್.ಕೆ.ಹೈಸ್ಕೂಲ ಮೈದಾನದಲ್ಲಿ ನಡೆದ ರಾಜ್ಯೋತ್ಸವ ಧ್ವಜಾರೋಹಣದಲ್ಲಿ ಪಾಲ್ಗೊಂಡ ತಾಲೂಕಾಡಳಿತದ ಅಧಿಕಾರಿಗಳು, ಶ್ರೀಗಳು ಇತರರಿದ್ದರು.
ಹುಕ್ಕೇರಿ: ರಾಜ್ಯೋತ್ಸವ ನವೆಂಬರ್ ಒಂದಕ್ಕೆ ಮಾತ್ರ ಸೀಮಿತವಾಗದೆ ವರ್ಷವಿಡಿ ಕರುನಾಡಿನ ಜನರ ಮನೆ ಮನಗಳಲ್ಲಿ ಇರಬೇಕು. ಮೈಸೂರು ದಸರಾಕ್ಕೆ ಹೆಸರಾದರೆ, ಬೆಳಗಾವಿ ರಾಜ್ಯೋತ್ಸವಕ್ಕೆ ಹೆಸರಾಗಿದೆ ಎಂದು ಗುರುಶಾಂತೇಶ್ವರ ಸಂಸ್ಥಾನ ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು ಹೇಳಿದರು.
ಶನಿವಾರದಂದು ಸ್ಥಳೀಯ ಎಸ್.ಕೆ ಹೈಸ್ಕೂಲಿನ ಮೈದಾನ ರಾಜ್ಯೋತ್ಸವ ಧ್ವಜಾರೋಹಣದಲ್ಲಿ ಪಾಲ್ಗೊಂಡು ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಕನ್ನಡವನ್ನು ಹುಡುಕುವಂತ ಪರಿಸ್ಥಿತಿ ಆಗುತ್ತಿದೆ. ಅದಕ್ಕಾಗಿ ಅಧಿಕಾರಿ ವರ್ಗ ಮತ್ತು ಜನಸಾಮಾನ್ಯರು ಮಾತೃಭಾಷೆ ಆದ ಕನ್ನಡಕ್ಕೆ ಆದ್ಯತೆ ನೀಡಬೇಕು ವ್ಯವಹಾರಕ್ಕಾಗಿ ಬೇರೆ ಭಾಷೆ ಕಲಿತರು ಕನ್ನಡಕ್ಕೆ ಮೊದಲ ಪ್ರಾಧಾನ್ಯತೆ ಕೊಡುವಂತೆ ತಿಳಿಸಿದರು
ತಹಸೀಲ್ದಾರ ಬಲರಾಮ ಕಟ್ಟಿಮನಿ ಅವರು ಮಾತನಾಡಿ ಹುಕ್ಕೇರಿಯಲ್ಲಿ ಅದ್ದೂರಿ ಕನ್ನಡ ರಾಜ್ಯೋತ್ಸವದ ಕನಸು ಕಂಡಿದ್ದ ತಾಲೂಕಾಡಳಿತಕ್ಕೆ ಪುರಸಭೆಯವರು ತಣ್ಣಿರು ಎರಚಿದರು. ಪಟ್ಟಣದ ಎಲ್ಲೆಡೆ ರಾರಾಜಿಸಬೇಕಾದ ಕನ್ನಡ ಧ್ವಜ ಎಲ್ಲಿಯೂ ಕಾಣುತ್ತಿಲ್ಲ. ಮುಖ್ಯಾಧಿಕಾರಿ ಧ್ವಜಾರೋಹಣಕ್ಕೂ ಹಾಜರಾಗದೇ ಅಸಡ್ಡೆ ವರ್ತಿಸಿದ್ದಾರೆ. ಅದಕ್ಕಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ಮುಖೇನ ವಿನಂತಿಸುತ್ತೇನೆ. ಇದೇ ತೆರನಾಗಿ ತಾಲೂಕಾಡಳಿತದ ಬಹಳಷ್ಟು ಅಧಿಕಾರಿಗಳು ಹಾಜರು ಇರದಿರುವುದು ಮನಸ್ಸಿಗೆ ನೋವನ್ನುಂಟು ಮಾಡಿದೆ. ಗೈರು ಹಾಜರು ಇರುವ ಅಧಿಕಾರಿಗಳ ವಿರುದ್ಧ ನೋಟಿಸ್ ನೀಡಿ ಮುಂಬರುವ ದಿನಗಳಲ್ಲಿ ಇಂತಹ ಘಟನೆ ನಡೆಯದಂತೆ ಕ್ರಮ ಕೈಗೊಳ್ಳುತ್ತೇನೆಂದು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರಕಾಶ ಅವಲಕ್ಕಿ ಅವರು ಮಾತನಾಡಿ ಕರ್ನಾಟಕ ರಾಜ್ಯೋತ್ಸವ ಕೇವಲ ಆಡಳಿತ ವರ್ಗಕ್ಕೆ ಮಾತ್ರ ಸಂಬಂಧಿಸಿಲ್ಲ. ಇದರಲ್ಲಿ ಎಲ್ಲ ಜನತೆ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಪ್ರಮುಖವಾಗಿ ಯುವ ಜನಾಂಗ ರಾಜ್ಯೋತ್ಸವದ ಸಂಭ್ರಮಕ್ಕೆ ಮೆರಗು ನೀಡಬೇಕೆಂದರು.
ನಂತರ ಅಡವಿಸಿದ್ದೇಶ್ವರ ಮಠದಿಂದ ತಾಯಿ ಭುವನೇಶ್ವರಿ ಭಾವಚಿತ್ರದ ಮೆರವಣಿಗೆ ಜರುಗಿತು.
ಕ್ಯಾರಗುಡ್ಡ ಅವಜೀಕರ ಆಶ್ರಮದ ಅಭಿನವ ಮಂಜುನಾಥ ಶ್ರೀಗಳು, ತಾಲೂಕ ಪಂಚಾಯತಿ ಇ.ಒ ಟಿ ಆರ್ ಮಲ್ಲಾಡದ, ಗ್ರೇಡ 2 ತಹಸೀಲ್ದಾರ್ ಪ್ರಕಾಶ ಕಲ್ಲೋಳಿ, ಶಿರಸ್ತೆದಾರ್ ಎನ್.ಆರ್.ಪಾಟೀಲ, ಸಂತೋಷ ನಾಯ್ಕರ, ಸಿಡಿಪಿಒ ಎಚ್. ಹೊಳೆಪ್ಪಾ, ಬಿ.ಆರ್.ಸಿ ಎ.ಎಸ್.ಪದ್ಮನ್ನವರ, ಪೋಲಿಸ್ ಇನಸ್ಪೆಕ್ಟರ್ ಮಹಾಂತೇಶ್ ಬಸಾಪುರ, ವಿದ್ಯುತ್ ಸಹಕಾರಿ ಸಂಘದ ಅಧ್ಯಕ್ಷ ಮಹಾವೀರ ನಿಲಜಗಿ, ಮುಖಂಡರಾದ ಪ್ರಜ್ವಲ ನಿಲಜಗಿ, ಸುಭಾಸ ನಾಯಿಕ, ಇಮ್ರಾನ ಮೋಮಿನ್, ಕಬೀರ ಮಲೀಕ್, ತಮ್ಮನಗೌಡ ಪಾಟೀಲ, ಶ್ಯಾನೂರ ತಹಸೀಲ್ದಾರ, ಪ್ರಮೋದ ಕೂಗೆ ಮೆರವಣಿಗೆಯಲ್ಲಿದ್ದರು.





