ಸ್ಥಳೀಯ ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಗಳ ವಿಭಾಗವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತಾ ಪರಿಶೀಲಿಸಿದರು. ಎಂ.ಎಸ್.ಪಲ್ಲೇದ, ಉದಯ ಕುಡಚಿ, ಎಂ.ಎಂ. ನರಸನ್ನವರ ಇತರರಿದ್ದರು.
ಹುಕ್ಕೇರಿ: ಸ್ಥಳೀಯ ತಾಲೂಕಾ ಸಾರ್ವಜನಿಕ ಸರಕಾರಿ ಆಸ್ಪತ್ರೆ ಶತಮಾನ ಪೂರೈಸಿದ್ದರು ಪ್ರಮುಖವಾಗಿ ಶುಚಿತ್ವ ಮತ್ತು ರೋಗಿಗಳಿಗೆ ಬಿಸಿನೀರಿನ ವ್ಯವಸ್ಥೆಯ ಕೊರತೆ ಕಂಡು ಬರುತ್ತಿದೆ. ಇದರ ಜತೆಗೆ ವೈದ್ಯರ ಕೊರತೆ ಇದ್ದು ಅದನ್ನು ಆದಷ್ಟು ಬೇಗ ಈಡೇರಿಸುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತಾ ಹೇಳಿದರು.
ಸೋಮವಾರದಂದು ಅವರು ಆಸ್ಪತ್ರೆಗೆ ಅನಿರೀಕ್ಷಿತವಾಗಿ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಈ ಸರಕಾರಿ ಆಸ್ಪತ್ರೆಗೆ ಗ್ರಾಮೀಣ ಪ್ರದೇಶದ ರೋಗಿಗಳು ಹೆಚ್ಚಾಗಿ ಆಗಮಿಸಿ ಚಿಕಿತ್ಸೆ ಪಡೆಯುತ್ತಿರುವದನ್ನು ಕೇಳಿ ಪರಿಶೀಲಿಸಿದ್ದೇನೆ. ಆಸ್ಪತ್ರೆಗೆ ನೂರು ವರ್ಷವಾದರೂ ಇದಕ್ಕೆ ಬೇಕಾದ ಅವಶ್ಯಕತೆ ಮತ್ತು ಮೂಲಭೂತ ಸಮಸ್ಯೆಗಳನ್ನು ಇಲ್ಲಿಯ ವೈದ್ಯರು, ರೋಗಿಗಳು ನನಗೆ ತಿಳಿಸಿದ್ದಾರೆ. ಅವರ ಬೇಡಿಕೆಗೆ ಅನುಗುಣವಾಗಿ ಅವಶ್ಯಕ ಸಿಬ್ಬಂದಿ, ತಾಯಿ ಮತ್ತು ಮಗು ಆಸ್ಪತ್ರೆ, ವೈದ್ಯಕೀಯ ಉಪಕರಣಗಳ ಪೂರೈಕೆಗೆ, ರೋಗಿಗಳಿಗೆ ಆದ್ಯತೆ ನೀಡುವುದಾಗಿ ತಿಳಿಸಿದರು.

ಸ್ಥಳೀಯ ಸರಕಾರಿ ಆಸ್ಪತ್ರೆಯಲ್ಲಿ ರಕ್ತ ತಪಾಸಣಾ ವಿಭಾಗದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತಾ. ಎಂ.ಎಸ್.ಪಲ್ಲೇದ, ಉದಯ ಕುಡಚಿ, ಎಂ.ಎಂ.ನರಸನ್ನವರ, ಸಂತೋಷ ಪಾಟೀಲ ಇತರರಿದ್ದರು.
ಮಧ್ಯಾಹ್ನ ಆಸ್ಪತ್ರೆಗೆ ಭೇಟಿ ನೀಡಿದ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತಾ ಅವರು ಪ್ರತಿಯೊಬ್ಬ ವೈದ್ಯರನ್ನು, ಸಿಬ್ಬಂದಿಗಳನ್ನು ಮತ್ತು ಶುಶ್ರೂಕಿಯರನ್ನು ಪ್ರತ್ಯೇಕವಾಗಿ ಮಾತನಾಡಿಸಿ ಕುಂದುಕೊರತೆ ಆಲಿಸಿದರು. ನಂತರ ಪ್ರತಿ ವಿಭಾಗಕ್ಕೂ ಭೇಟಿ ನೀಡಿ ರೋಗಿಗಳನ್ನು ಮಾತನಾಡಿಸಿ ವೈದ್ಯರು ಮತ್ತು ಶುಶ್ರೂಕಿಯರ ಕರ್ತವ್ಯ ಹಾಗೂ ಸ್ಪಂದನೆ ಕೇಳಿ ತಿಳಿದುಕೊಂಡರು. ನಂತರ ಆಸ್ಪತ್ರೆಯ ತೀವೃ ನಿಗಾ ಘಟಕ, ಡಯಾಲಿಸಿಸ್ ಘಟಕ, ಔಷಧಿ ಸಂಗ್ರಹಗಳ ಕೊಠಡಿ, ಶೌಚಾಲಯಗಳನ್ನು ಪರಿಶೀಲಿಸಿದರು. ಸ್ವಚ್ಚತೆ ಇಲ್ಲದ ಶೌಚಾಲಯಗಳ ಕುರಿತು ಮುಖ್ಯ ವೈದ್ಯಾಧಿಕಾರಿಗಳನ್ನು ಪ್ರಶ್ನಿಸಿದರು. ಆಸ್ಪತ್ರೆಯ ಸಮರ್ಪಕ ಒಳ ಚರಂಡಿ ವ್ಯವಸ್ಥೆ ಇಲ್ಲವೆಂಬ ವಿಷಯ ಅರಿತ ಪ್ರಧಾನ ಕಾರ್ಯದರ್ಶಿ ಅವರು ತಕ್ಷಣ ಪ್ರತ್ಯೇಕವಾಗಿ ಒಳ ಚರಂಡಿ ವ್ಯವಸ್ಥೆ ಕ್ರಿಯಾಯೋಜನೆ ತಯಾರಿಸಿ ಸಲ್ಲಿಸಲು ತಿಳಿಸಿದರು. ಗುತ್ತಿಗೆ ಆಧಾರಿತ ಸಿಬ್ಬಂದಿಗಳ ವೇತನ, ಅವರಿಗೆ ಸಲ್ಲಬೇಕಾದ ಸೌಲಭ್ಯಗಳ ಮಾಹಿತಿ ಪಡೆದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿಲ್ಲಾ ಉಪನಿರ್ದೇಶಕ ಎಂ.ಎಸ್.ಪಲ್ಲೇದ, ತಾಲೂಕಾ ವೈದ್ಯಾಧಿಕಾರಿ ಉದಯ ಕುಡಚಿ, ಮುಖ್ಯ ವೈದ್ಯಾಧಿಕಾರಿ ಎಂ.ಎಂ.ನರಸನ್ನವರ, ಎಲುಬು ಕೀಲು ತಜ್ಞ ಎಂ.ಸಿವಿಜಾಪೂರೆ, ಸ್ತ್ರೀರೋಗ ತಜ್ಞ ಈರಣ್ಣಾ ಕಳ್ಳಿ, ಶಸ್ತ್ರ ಚಿಕಿತ್ಸಾ ತಜ್ಞ ದೀಪಕ ಅಂಬಲಿ, ದಂತ ವೈದ್ಯ ವಿನೋದಕುಮಾರ ಮತ್ತಿತರರಿದ್ದರು.





