ಸ್ಥಳೀಯ ಪುರಸಭೆಯಿಂದ ತರಕಾರಿ ಮಾರುಕಟ್ಟೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಶಾಸಕ ನಿಖಿಲ ಕತ್ತಿ. ಇಮ್ರಾನ್ ಮೋಮಿನ, ಜ್ಯೋತಿ ಬಡಿಗೇರ, ಮಹಾಂತೇಶ ತಳವಾರ, ಮಹಾವೀರ ನಿಲಜಗಿ, ಎ.ಕೆ.ಪಾಟೀಲ ಇತರರಿದ್ದರು.
ಹುಕ್ಕೇರಿ: ಪುರಸಭೆ ಭೃಷ್ಟಾಚಾರದ ಕೂಪವಾಗಿದೆ ಎಂದು ಹಲವಾರು ದೂರುಗಳು ಬಂದಿವೆ. ಮಾಧ್ಯಮದವರು ಇಂತಹ ವರದಿ ಮಾಡಿದಲ್ಲಿ ಸಂಬಂಧಿಸಿದ ಇಲಾಖೆಯ ಜಿಲ್ಲಾ ಮತ್ತು ರಾಜ್ಯ ಅಧಿಕಾರಿಗಳ ಜೊತೆಗೆ ಚರ್ಚಿಸಿ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಶಿಪಾರಸ್ಸು ಮಾಡುತ್ತೇನೆ ಎಂದು ಶಾಸಕ ನಿಖಿಲ ಕತ್ತಿ ಹೇಳಿದರು.
ಸೋಮವಾರದಂದು ಸ್ಥಳೀಯ ಪುರಸಭೆ ಆವರಣದಲ್ಲಿ ತರಕಾರಿ ಮಾರುಕಟ್ಟೆ ನಿರ್ಮಾಣ ಕಾಮಗಾರಿ, ಹೊಸದಾಗಿ ಖರೀದಿಸಿದ ಟ್ರ್ಯಾಕ್ಟರ್ ಮತ್ತು ನೀರಿನ ಟ್ಯಾಂಕ್ಗಳ ಹಸ್ತಾಂತರ, ಪೌರ ಕಾರ್ಮಿಕರಿಗೆ ಸಮವಸ್ತ್ರ ವಿತರಣೆ ಹಾಗೂ ಬಡ ಪ್ರತಿಭಾವಂತ ಮಕ್ಕಳಿಗೆ ಲ್ಯಾಪಟ್ಯಾಪ್ ವಿತರಿಸಿ ಮಾತನಾಡಿದರು.

ರೇರಾ ಕಾಯ್ದೆ ಉಲ್ಲಂಘಿಸಿ ಅನಧಿಕೃತ ಲೇ ಔಟಗಳ ಉತಾರ ನೀಡಿಕೆ, ಈ ಮೊದಲು ಪೌರ ಕಾರ್ಮಿಕರಿಗೆ ವಿತರಿಸಬೇಕಾದ ಸಮವಸ್ತ್ರ, ಬೂಟ್, ಗ್ಲೌಜ್ ವಿತರಿಸದೇ ಇರುವುದು, ಸ್ಲಂ ಬೋರ್ಡ ಮನೆ ಮಂಜೂರಿಯಲ್ಲಿ ಫಲಾನುಭವಿಗಳಿಂದ ಹಣ ಪಡೆಯುತ್ತಿರುವುದು ಸೇರಿದಂತೆ ಹತ್ತು ಹಲವು ಆರೋಪಗಳಿವೆ. ಒಟ್ಟಾರೆ ಈ ಪುರಸಭೆಯಲ್ಲಿ ಹಣ ನೀಡದೇ ಯಾವುದೇ ಕೆಲಸಗಳು ಆಗುವುದಿಲ್ಲವೆಂಬ ಮಾತು ಜನ ಜನಿತವಾಗಿದೆ. ಈ ಎಲ್ಲ ಆರೋಪಗಳು ಗೊತ್ತಾದರೂ ಇವರ ಮೇಲಾಧಿಕಾರಿಗಳು ಸುಮ್ಮನಿರುವುದು ಆಶ್ಚರ್ಯ ತಂದಿದೆ ಎಂದರು. ಶಾಸಕನಾಗಿ ನಾನು ಇಂತಹ ಜನ ವಿರೋಧಿ ಕೃತ್ಯಗಳನ್ನು ಬೆಂಬಲಿಸುವುದಿಲ್ಲವೆಂದರು. ಮಾಧ್ಯಮದವರು ಇಂತಹ ದುರಾಡಳಿತದ ವಿರುದ್ಧ ಧ್ವನಿ ಎತ್ತಬೇಕು ಎಂದು ತಿಳಿಸಿದರು.
ಪುರಸಭೆ ಸದಸ್ಯ ಸದಾಶಿವ ಕರೆಪ್ಪಗೋಳ ಮಾತನಾಡಿ ರೇರಾ ಕಾಯ್ದೆ ಉಲ್ಲಂಘಿಸಿ ಅನಧಿಕೃತ ಲೇ ಔಟಗಳಿಗೆ ಉತಾರ ನೀಡುತ್ತಿರುವುದನ್ನು ಆಕ್ಷೇಪಿಸಿ ಇದೇ ವರ್ಷ ಏಪ್ರೀಲ್ ತಿಂಗಳಲ್ಲಿ ವಕೀಲರ ಮೂಲಕ ಮುಖ್ಯಾಧಿಕಾರಿಗಳಿಗೆ ಕಾನೂನಾತ್ಮಕ ನೋಟೀಸ್ ನೀಡಿದ್ದೇನೆ ಎಂದು ಶಾಸಕರ ಗಮನಕ್ಕೆ ತಂದರು.
ಅಧ್ಯಕ್ಷ ಇಮ್ರಾನ ಮೋಮಿನ್, ಉಪಾಧ್ಯಕ್ಷೆ ಜ್ಯೋತಿ ಬಡಿಗೇರ, ಸ್ಥಾಯಿ ಸಮಿತಿ ಚೇರಮನ್ ಮಹಾಂತೇಶ ತಳವಾರ, ಸದಸ್ಯರಾದ ಎ.ಕೆ.ಪಾಟೀಲ, ಮಹಾವೀರ ನಿಲಜಗಿ, ಆನಂದ ಗಂಧ, ಸದಾಶಿವ ಕರೆಪ್ಪಗೋಳ, ರೇಖಾ ಚಿಕ್ಕೋಡಿ, ಸದಾಶಿವ ಕರೆಪ್ಪಗೋಳ, ರುಕ್ಮೀಣಿ ಹಳಿಜೋಳ, ಸುರೇಖಾ ಗಳತಗಿಮಠ, ಮುಖ್ಯಾಧಿಕಾರಿ ಈಶ್ವರ ಸಿದ್ನಾಳ, ಅಭಿಯಂತರ ರಾಜಶೇಖರ ಪಟ್ಟಣಶೆಟ್ಟಿ ಇತರರಿದ್ದರು.
ಸನ್ 2019-20 ನೇ ಸಾಲಿನ ಶಾಸಕರ ಅನುದಾನದಡಿ ಮಂಜೂರಿಯಾದ 90 ಲಕ್ಷ ರೂ ವೆಚ್ಚದಲ್ಲಿ ತರಕಾರಿ ಮಾರುಕಟ್ಟೆ, 40 ಲಕ್ಷ ರೂ ವೆಚ್ಚದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕದ ನಿರ್ಮಾಣ, 15ನೇ ಹಣಕಾಸು ಯೋಜನೆಯಡಿ ಟ್ರ್ಯಾಕ್ಟರ್, ನೀರಿನ ಟ್ಯಾಂಕರ್ ಖರೀದಿ, ನಗರೋತ್ಥಾನ ಯೋಜನೆಯಡಿ ಪೌರ ಕಾರ್ಮಿಕರಿಗೆ ಸಮವಸ್ತ್ರ ವಿತರಣೆ ಮಾಡಲಾಗಿದೆ.: ನಿಖಿಲ ಕತ್ತಿ ಶಾಸಕರು





