ತಾಲೂಕಿನ ಘೋಡಗೇರಿ ಗ್ರಾಮದ ನೊಗನಿಹಾಳ ಸೇತುವೆ ತಾಲೂಕಾಡಳಿತದ ಅಧಿಕಾರಿಗಳೊಂದಿಗೆ ಪ್ರವಾಹ ಪರಿಸ್ಥಿತಿ ಕುರಿತು ಮಾಜಿ ಸಂಸದ ರಮೇಶ ಕತ್ತಿ ಚರ್ಚಿಸಿದರು. ರಾಚಯ್ಯಾ ಹಿರೇಮಠ, ಕಲಗೌಡ ಪಾಟೀಲ, ಗುರು ಕಡೇಲಿ, ಆದರ್ಶ ಅಂಕಲಗಿ ಇತರರಿದ್ದರು.
ಹುಕ್ಕೇರಿ: ವಾಯುಭಾರ ಕುಸಿತದಿಂದ ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಹಿಡಕಲ್ ಜಲಾಶಯ ತುಂಬಿದೆ. ಅದರಿಂದ ಘಟಪ್ರಭಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ.ಇದರ ಜತೆಗೆ ಹಿರಣ್ಯಕೇಶಿ ನದಿ ಸಹ ಪ್ರವಾಹ ಭೀತಿ ಹೆಚ್ಚಿಸಿದೆ. ಅದಕ್ಕಾಗಿ ನದಿ ತೀರದ ಗ್ರಾಮಗಳ ಜನತೆ ಮುನ್ನೆಚ್ಚರಿಕೆ ಕ್ರಮವಾಗಿ ಎತ್ತರದ ಪ್ರದೇಶಗಳಿಗೆ ತೆರಳಬೇಕೆಂದು ಮಾಜಿ ಸಂಸದ ರಮೇಶ ಕತ್ತಿ ವಿನಂತಿಸಿದರು.
ಬುಧವಾರದಂದು ತಾಲೂಕಿನ ಘೋಡಗೇರಿ ಗ್ರಾಮದಲ್ಲಿ ಘಟಪ್ರಭಾ ನದಿ ಪ್ರವಾಹ ವೀಕ್ಷಿಸಿದ ಬಳಿಕ ಮಾತನಾಡಿದರು. ಹಿರಣ್ಯಕೇಶಿ ನದಿ ಪಾತ್ರದಲ್ಲಿ ಬರುವ ಕೋಚರಿ, ಅರ್ಜುನವಾಡ, ಬಡಕುಂದ್ರಿ, ಗೌಡವಾಡ, ಯರಗಟ್ಟಿ, ಯರನಾಳ, ಹೊಸೂರ, ಸುಲ್ತಾನಪೂರ ಮತ್ತು ಇಂಗಳಿ ಗ್ರಾಮಗಳ ಹಾಗೂ ಘಟಪ್ರಭಾ ಮತ್ತು ಹಿರಣ್ಯಕೇಶಿ ನದಿ ಸಂಗಮ ಸ್ಥಳವಾದ ಸುಲ್ತಾನಪೂರದ ಕೂಡಲ ಸಂಗಮ ಸ್ಥಳದಿಂದ ಕೆಳಗೆ ಬರುವ ನೊಗನಿಹಾಳ, ಅವರಗೋಳ, ಕೊಟಬಾಗಿ, ಗುಡಸ, ಝಂಗಟಿಹಾಳ, ಶಿರಢಾಣ ಗ್ರಾಮಸ್ಥರು ತಕ್ಷಣ ಸುರಕ್ಷಿತ ಸ್ಥಳಕ್ಕೆ ತೆರಳಬೇಕು. ಈ ಗ್ರಾಮಸ್ಥರಿಗೆ ತಾಲೂಕಾಡಳಿತ ಕಾಳಜಿ ಕೇಂದ್ರ ತೆರೆದು ಜನರಲ್ಲಿ ಪ್ರವಾಹ ಭೀತಿಯ ಆತಂಕ ನಿವಾರಿಸುವಂತೆ ಸೂಚಿಸಿದರು.

ಚಿತ್ರಿ ಜಲಾಶಯದಿಂದ 35 ಸಾವಿರ ಕ್ಯೂಸೆಕ್ಸ್ ಮತ್ತು ನದಿಯ 7 ಸಾವಿರ ಕ್ಯೂಸೆಕ್ಸ್ ಸೇರಿ ಒಟ್ಟು 42 ಸಾವಿರ ಕ್ಯೂಸೆಕ್ಸ್ ಹಿರಣ್ಯಕೇಶಿ ನದಿಗೆ 42 ಸಾವಿರ ಕ್ಯೂಸೆಕ್ಸ್ ಮತ್ತು ಹಿಡಕಲ್ ಜಲಾಶಯದಿಂದ 35 ಸಾವಿರ ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ. ಇದರಿಂದ ಯರನಾಳ-ಹುಕ್ಕೇರಿ ಮತ್ತು ಘೋಡಗೇರಿ-ಹುಕ್ಕೇರಿ ರಸ್ತೆ ಸಂಪರ್ಕ ಕಡಿತವಾಗಿದ್ದು, ಬಡಕುಂದ್ರಿ ಸೇತುವೆ ಮೇಲೆ ದಾಟಿ ಪರ್ಯಾಯ ಮಾರ್ಗ ಬಳಸುವಂತೆ ತಿಳಿಸಿದರು. ಬಿಜೆಪಿ ಮಂಡಲ ಅಧ್ಯಕ್ಷ ರಾಚಯ್ಯಾ ಹಿರೇಮಠ, ವಿದ್ಯುತ್ ಸಹಕಾರಿ ಸಂಘದ ನಿರ್ದೇಶಕ ಕಲಗೌಡ ಪಾಟೀಲ, ಬಿಜೆಪಿ ಸೋಶಿಯಲ್ ಮೀಡಿಯಾ ಪ್ರತಿನಿಧಿ ಆದರ್ಶ ಅಂಕಲಗಿ, ರೈತ ಮುಖಂಡರಾದ ದುಂಡನಗೌಡ ಪಾಟೀಲ, ಗುರು ಕಡೇಲಿ, ಚನ್ನಪ್ಪಾ ಸೊಂಟನವರ, ಮುತ್ತು ಭೂಶಿ, ನಿರ್ವಾಣಿ ಅಂಕಲಗಿ, ಮುತ್ತು ಗೌರಿ, ಶ್ರೀಕಾಂತ ರುದ್ರಪ್ಪಗೋಳ, ಪುಂಡಲೀಕ ಪೂಜೇರಿ, ಬಾಬು ಅಂಕಲಗಿ, ಶ್ರೀಶೈಲ ಭೂಶಿ, ವಿಶಾಲ ಪೂಜೇರಿ, ಸುರೇಶ ರಾಜನ್ನವರ ಮತ್ತು ಕಂದಾಯ ನಿರೀಕ್ಷಕ ಮಲ್ಲಿಕಾರ್ಜುನ ಸಾರಾಪೂರಿ, ಪಿಡಿಒ ಮಲ್ಲಿಕಾರ್ಜುನ ಗುಡಸಿ, ಗ್ರಾಮ ಆಡಳಿತಾಧಿಕಾರಿ ಬಸವರಾಜ ಚೌಗಲಾ ಮತ್ತಿತರರಿದ್ದರು.







