ಹುಕ್ಕೇರಿ ಪುರಸಭೆ ಚಿತ್ರಣ.
ಹುಕ್ಕೇರಿ ಪುರಸಭೆಯಲ್ಲಿ ರೇರಾ ಅನುಮತಿ ಇಲ್ಲದ ಬಡಾವಣೆಗಳ ಪಹಣಿ ಹಂಚಿಕೆ ವಿಚಾರದಲ್ಲಿ ಕೋಟ್ಯಾಂತರ ರೂ ಅವ್ಯವಹಾರ ಆಗಿರುವ ಆರೋಪದ ಹಿನ್ನೆಲೆಯಲ್ಲಿ ಲೋಕಾಯುಕ್ತರು ದಾಳಿ ನಡೆಸಿದ್ದಾರೆ.
ಗುರುವಾರದಂದು ಸಂಜೆ ಹುಕ್ಕೇರಿ ಪುರಸಭೆ ಅನಿರೀಕ್ಷಿತವಾಗಿ ಆಗಮಿಸಿದ ಲೋಕಾಯುಕ್ತ ನ್ಯಾಯಾಧೀಶರಾದ ರಾಮನಾಥ ಚವ್ಹಾಣ ನೇತೃತ್ವದ ತಂಡ ದಾಳಿ ನಡೆಸಿ ದಾಖಲೆಗಳನ್ನು ಮತ್ತು ಕಡತ ಪರಿಶೀಲಿಸಿತು.ನಂತರ ಲೋಕಾಯುಕ್ತ ನ್ಯಾಯಾಧೀಶರು ಪುರಸಭೆ ಅಧಿಕಾರಿಗಳನ್ನ ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡು ರೇರಾ ಕಾಯ್ದೆ ಅಳವಡಿಸದ ಹೊಸ ಬಡಾವಣೆಗಳ ಉತಾರ ವಿತರಿಸಿದ್ದೇಕೆಂದು ಪ್ರಶ್ನಿಸಿದರು.ರೇರಾ ನಿಯಮಾವಳಿ ಅನುರಿಸದ ಲೇಔಟಗಳ ನೂರಾರು ಉತಾರಗಳನ್ನು ಪುರಸಭೆ ನೀಡಿದ್ದರಿಂದ ನಿವೇಶನ ಖರೀದಿದಾರರಿಗೆ ಅನ್ಯಾಯವೆಸಗಿದೆ ಎಂಬ ಶಂಕೆ ಮೂಡಿದೆ
ನೂತನ ಬಡಾವಣೆಗಳಲ್ಲಿ ರಸ್ತೆ, ಚರಂಡಿ ಮತ್ತು ಬೀದಿ ದೀಪಗಳು ಸೇರಿದಂತೆ ಮೂಲಭೂತ ಸೌಕರ್ಯ ಅಳವಡಿಸದೇ ಇದ್ದರೂ ಪಹಣಿ ಪತ್ರ ನೀಡಿದ್ದು ಅಪರಾಧವಾಗುತ್ತದೆ.ಕಾರಣ ರೇರಾ ನಿಯಮದಡಿ ದಾಖಲಾಗದ ಲೇಔಟಗಳ ವಿವರ ಮತ್ತು ಇಲ್ಲಿಯವರೆಗೆ ಅಂತಹ ನಿವೇಶನಗಳ ಎಷ್ಟು ಉತಾರಗಳನ್ನು ಪುರಸಭೆ ವಿತರಿಸಿದೆ ಎಂಬುದರ ವಿವರವನ್ನು ಶುಕ್ರವಾರ ದಿ.೮ ರ ಮಧ್ಯಾಹ್ನದೊಳಗೆ ಬೆಳಗಾವಿ ಲೋಕಾಯುಕ್ತ ಕಚೇರಿಗೆ ತಲುಪಿಸಬೇಕೆಂದು ಪುರಸಭೆ ಮುಖ್ಯಾಧಿಕಾರಿ ಈಶ್ವರ ಸಿದ್ನಾಳ, ಕಿರಿಯ ಅಭಿಯಂತರ ರಾಜಶೇಖರ ಪಟ್ಟಣಶೆಟ್ಟಿ ಅವರಿಗೆ ಆದೇಶಿಸಿದರು.
ಇದೇ ಸಂದರ್ಭದಲ್ಲಿ ಮಾಹಿತಿ ಹಕ್ಕು ಅಡಿ ಮಾಹಿತಿ ಕೇಳಿದರೆ ನೀಡುತ್ತಿಲ್ಲವೆಂಬ ಕೆಲವರ ಆರೋಪದಿಂದ ಅಧಿಕಾರಿಗಳನ್ನ ನ್ಯಾಯಾಧೀಶರು ತರಾಟೆಗೆ ತೆಗೆದುಕೊಂಡು ತಕ್ಷಣ ಅಂತಹ ಅರ್ಜಿಗಳಿಗೆ ಉತ್ತರಿಸಿ ಮಾಹಿತಿ ಒದಗಿಸಬೇಕೆಂದು ಸೂಚಿಸಿದರು.
ಲೋಕಾಯುಕ್ತರ ಈ ಭೇಟಿಗೂ ಮುನ್ನ ಸಾರ್ವಜನಿಕರು ಮತ್ತು ಪತ್ರಕರ್ತರು ಶಾಸಕರಿಗೆ ಈ ಅಧಿಕಾರಿಗಳ ವಿರುದ್ಧ ಹಲವಾರು ದೂರು ನೀಡಿದ್ದರು. ಶಾಸಕರು ಖಡಕ್ಕಾಗಿ ಪ್ರಶ್ನಿಸಿ ಇಂತಹ ವರ್ತನೆ ಸಹಿಸುವುದಿಲ್ಲವೆಂದು ಕಿಡಿ ಕಾರಿದ್ದರೂ ಅಧಿಕಾರಿಗಳು ತಮ್ಮ ವರ್ತನೆ ಸುಧಾರಿಸಿಕೊಂಡಿರಲಿಲ್ಲ.ಇದೀಗ ಲೋಕಾಯುಕ್ತರ ಪ್ರವೇಶದಿಂದ ಈ ಅಧಿಕಾರಿಗಳ ಮೇಲೆ ಕ್ರಮ ಕೈಗೊಳುವರೆಂಬ ಆಶಾಭಾವ ಜನರದ್ದಾಗಿದೆ.





