ಸ್ಥಳೀಯ ಸರಕಾರಿ ಆಸ್ಪತ್ರೆ ಆವರಣದಲ್ಲಿ ನೂತನವಾಗಿ ನಿರ್ಮಿಸಿದ ವಸತಿ ಗೃಹಗಳ ಕಟ್ಟಡದ ಉದ್ಘಾಟನಾ ಸಮಾರಂಭಕ್ಕೆ ಸಚಿವ ದಿನೇಶ ಗುಂಡೂರಾವ ಚಾಲನೆ ನೀಡಿದರು.ಶಾಸಕ ನಿಖಿಲ ಕತ್ತಿ, ಮುಖಂಡರು ಮತ್ತು ಅಧಿಕಾರಿಗಳಿದ್ದರು.
ಹುಕ್ಕೇರಿ ತಾಲೂಕಿನ ಸರಕಾರಿ ಆಸ್ಪತ್ರೆಗೆ ತಾಯಿ ಮತ್ತು ಮಗು ವಿಶೇಷ ಘಟಕದ ನಿರ್ಮಾಣದ, ಸಿಬ್ಬಂದಿಗಳ ಕೊರತೆ ನೀಗಿಸುವುದು ಹಾಗೂ ಹಟ್ಟಿ ಆಲೂರ, ಪಾಶ್ಚಾಪೂರ ಗ್ರಾಮಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಪ್ರಾರಂಭಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಶಾಸಕರು ಮಂಡಿಸಿದ್ದಾರೆ. ಅವುಗಳನ್ನು ಖಂಡಿತ ಈಡೇರಿಸುತ್ತೇನೆ ಎಂದು ಆರೋಗ್ಯ ಇಲಾಖೆ ಸಚಿವ ದಿನೇಶ ಗುಂಡೂರಾವ ಭರವಸೆ ನೀಡಿದರು.
ಶನಿವಾರದಂದು ಸ್ಥಳೀಯ ಸರಕಾರಿ ಆಸ್ಪತ್ರೆ ಆವರಣದಲ್ಲಿ ನೂತನವಾಗಿ ನಿರ್ಮಿಸಿದ ವಸತಿ ಗೃಹಗಳ ಕಟ್ಟಡದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.ಉತ್ತರ ಕರ್ನಾಟಕದ ಗಟ್ಟಿ ಧ್ವನಿಯಾಗಿದ್ದ ಹಿರಿಯ ರಾಜಕಾರಣಿ ದಿ.ಉಮೇಶ ಕತ್ತಿ ಅವರ ನೇರ ನಡೆ ನುಡಿ ವ್ಯಕ್ತಿಯಾಗಿದ್ದರೆಂದರು. ಇದೀಗ ಅವರ ಪುತ್ರ ಹುಕ್ಕೇರಿ ಕ್ಷೇತ್ರ ಪ್ರತಿನಿಧಿಸುತ್ತಿದ್ದಾರೆ.ಕಾರಣ ಶಾಸಕ ನಿಖಿಲ ಕತ್ತಿ ಅವರ ಎಲ್ಲ ಬೇಡಿಕೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುತ್ತೇನೆ ಎಂದರು.
ರಾಜ್ಯದ ಅಭಿವೃದ್ಧಿ ಕಾರ್ಯಗಳಲ್ಲಿ ಕಾಂಗ್ರೆಸ್ ಪಕ್ಷಾತೀತವಾಗಿ ಎಲ್ಲ ಶಾಸಕರಿಗೆ ಸ್ಪಂದಿಸುತ್ತಿದೆ. ಜನ ಸಾಮಾನ್ಯರ ಮತ್ತು ಬಡವರಿಗೆ ಸರಕಾರಿ ಆಸ್ಪತ್ರೆಗಳು ವರದಾನವಾಗಿವೆ. ಕಡಿಮೆ ವೆಚ್ಚದಲ್ಲಿ ತಜ್ಞ ವೈದ್ಯರಿಂದ ಚಿಕಿತ್ಸೆ ನೀಡುವುದರಿಂದ ಎಲ್ಲ ವರ್ಗದವರಿಗೆ ಇವು ಆಶಾಕಿರಣ ಆಗಿವೆ ಎಂದು ತಿಳಿಸಿದರು. ಶಾಸಕ ನಿಖಿಲ ಕತ್ತಿ ಮಾತನಾಡಿ ಸರಕಾರಿ ಆಸ್ಪತ್ರೆ ಶತಮಾನದ ಸಂಭ್ರಮದಲ್ಲಿದ್ದು ಇದಕ್ಕೆ ಆಧುನಿಕ ಸೌಲಭ್ಯ ಒದಗಿಸುವ ಮೂಲಕ ಜನ ಸಾಮಾನ್ಯರ ಆಶೋತ್ತರ ಈಡೇರಿಸಬೇಕಾಗಿದೆ. ಈಗಾಗಲೇ ಈ ಆಸ್ಪತ್ರೆಗೆ ನಮ್ಮ ತಂದೆ ಸಚಿವರಿದ್ದಾಗ ಸಾಕಷ್ಟು ಆಧುನೀಕತೆ ಕಲ್ಪಿಸಿದ್ದಾರೆ ಎಂದರು. ಹುಕ್ಕೇರಿ ಮತಕ್ಷೇತ್ರದ ಜನಸಂಖ್ಯೆ ೩ಲಕ್ಷದ ಸಮೀಪದಲ್ಲಿದ್ದು ಅವರಿಗೆ ಆರೋಗ್ಯ ಸೌಕರ್ಯ ಕಲ್ಪಿಸಲು ಇನ್ನಷ್ಟೂ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮಂಜೂರ ಮಾಡುವಂತೆ ಸಚಿವರಲ್ಲಿ ಮನವಿಸಿಕೊಂಡರು. ಸಂಕೇಶ್ವರ, ಅಮಣಗಿ ಮತ್ತು ಹುಕ್ಕೇರಿ ಆಸ್ಪತ್ರೆಗಳಲ್ಲಿ ಅಂದಾಜು 9 ಕೋಟಿ ರೂ ವೆಚ್ಚದ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ನೆರವೇರುತ್ತಿರುವುದು ಸಂತಸ ತಂದಿದೆ ಎಂದು ಹೇಳಿದರು. ತಾಲೂಕಾ ವೈದ್ಯಾಧಿಕಾರಿ ಉದಯ ಕುಡಚಿ ಮಾತನಾಡಿ ಸನ್ 1925ರಲ್ಲಿ ಪ್ರಾರಂಭವಾದ ಈ ಆಸ್ಪತ್ರೆಗೆ ನಿತ್ಯ ಸಾವಿರಾರು ರೋಗಿಗಳು ಆಗಮಿಸಿ ಚಿಕಿತ್ಸೆ ಪಡೆಯುತ್ತಾರೆ. ಕಳೆದ 3 ವರ್ಷಗಳಿಂದ ಕತ್ತಿ ಕುಟುಂಬದ ಟ್ರಸ್ಟ್ನಿಂದ ಆಸ್ಪತ್ರೆಯ ಒಳ ರೋಗಿಗಳಿಗೆ ಅಲ್ಪಫಹಾರ ಮತ್ತು ಎರಡು ಅವಧಿಯ ಊಟದ ವ್ಯವಸ್ಥೆ ಕೈಕೊಂಡಿದ್ದಾರೆ.ಅದಕ್ಕಾಗಿ ಆಸ್ಪತ್ರೆಯ ಪರವಾಗಿ ಆ ಕುಟುಂಬಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆಂದರು. ಸಚಿವರು ಮತ್ತು ಶಾಸಕರನ್ನು ಸನ್ಮಾನಿಸಲಾಯಿತು. ರೈತ ಹಿತರಕ್ಷಣಾ ವೇದಿಕೆ ಅಧ್ಯಕ್ಷ ರಾಮಚಂದ್ರ ಜೋಶಿ ಅವರು ಆಸ್ಪತ್ರೆಗೆ ಬೇಕಾದ ಅವಶ್ಯಕತೆಗಳನ್ನು ವಿವರಿಸಿದರು. ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಆಯ್.ಪಿ.ಗಡಾದ, ಅಪರ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಎಸ್.ಎಸ್.ಗಡೇದ, ಸಹ ಆಯಕ್ತೆ ಪುಷ್ಪಾ ದೊಡಮನಿ, ತಹಸೀಲ್ದಾರ ಬಲರಾಮ ಕಟ್ಟಿಮನಿ, ತಾ.ಪಂ ಇ.ಒ ಟಿ.ಆರ್.ಮಲ್ಲಾಡದ, ತಾಲೂಕಾ ವೈದ್ಯಾಧಿಕಾರಿ ಉದಯ ಕುಡಚಿ, ಮುಖ್ಯ ವೈದ್ಯಾಧಿಕಾರಿ ಎಂ.ಎ.ನರಸನ್ನವರ, ಡಾ.ಪೂರ್ಣಿಮಾ ತಲ್ಲೂರ, ಪುರಸಭೆ ಅಧ್ಯಕ್ಷ ಇಮ್ರಾನ ಮೋಮಿನ್, ಮಹಾಂತೇಶ ತಳವಾರ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶ್ಯಾನೂರ ತಹಸೀಲ್ದಾರ, ಮುಖಂಡರಾದ ಮಹಾವೀರ ನಿಲಜಗಿ, ಭೀಮಗೌಡ ಅಮ್ಮಣಗಿ ಮತ್ತಿತರರಿದ್ದರು.






