ಸ್ಥಳೀಯ ಮಹಾವೀರ ಶಿಕ್ಷಣ ಸಂಸ್ಥೆ ಆವರಣದಲ್ಲಿ ಸರ್ವ ಧರ್ಮೀಯರ ಸಭೆಯನ್ನುದ್ದೇಶಿಸಿ ಮಾತನಾಡಿದ ಕ್ಯಾರಗುಡ್ಡ ಅವಜೀಕರ ಆಶ್ರಮದ ಅಭಿನವ ಮಂಜುನಾಥ ಶ್ರೀಗಳು. ಮಹಾವೀರ ನಿಲಜಗಿ, ಬಾಹುಬಲಿ ನಾಗನೂರಿ, ಸತ್ತೆಪ್ಪಾ ನಾಯಿಕ, ಗುರು ಕುಲಕರ್ಣಿ, ಡಾ.ಜಯಪ್ರಕಾಶ ಕರಜಗಿ ಮತ್ತಿತರರಿದ್ದರು.
ಹುಕ್ಕೇರಿ: ಧರ್ಮಸ್ಥಳ ವಿರುದ್ಧ ಅಪಪ್ರಚಾರ ಮತ್ತು ಅವಹೇಳನಕಾರಿಯಾಗಿ ಹೇಳಿಕೆ ನೀಡುತ್ತಿರುವ ಕೆಲವರು ಹಾಗೂ ಮುಸುಕಧಾರಿ ಮಾತು ಕೇಳಿ ಧರ್ಮಸ್ಥಳ ನೆಲ ಅಗಿಯುತ್ತಿರುವ ಸರಕಾರ ನಿಯೋಜಿತ ಎಸ್.ಐ.ಟಿ ಕಾರ್ಯ ಖಂಡಿಸಿ ನಿಡಸೋಸಿಯ ಜಗದ್ಗುರುಗಳ ನೇತ್ರತ್ವದಲ್ಲಿ ಮಂಗಳವಾರ ದಿ.19ರಂದು ಹುಕ್ಕೇರಿಯಲ್ಲಿ ಬ್ರಹತ್ ಪ್ರತಿಭಟನೆ ನಡೆಸಲು ಧರ್ಮಸ್ಥಳ ಧರ್ಮ ಪೀಠದ ಸದ್ಭಕ್ತರ ವೇದಿಕೆ ನಿರ್ಧರಿಸಿದೆ.

ಶುಕ್ರವಾರದಂದು ಪಟ್ಟಣ ಹೊರವಲಯದ ಮಹಾವೀರ ಶಿಕ್ಷಣ ಸಂಸ್ಥೆ ಆವರಣದಲ್ಲಿ ಸರ್ವ ಧರ್ಮೀಯರ ಸಭೆಯನ್ನುದ್ದೇಶಿಸಿ ಮಾತನಾಡಿದ ಕ್ಯಾರಗುಡ್ಡ ಅವಜೀಕರ ಆಶ್ರಮದ ಅಭಿನವ ಮಂಜುನಾಥ ಶ್ರೀಗಳು ಅವರು ಜಾತ್ಯಾತೀತವಾಗಿ ಸಮಾಜದ ಎಲ್ಲ ವರ್ಗದವರಿಗೆ ಆರ್ಥಿಕ ಸೌಲಭ್ಯ ಒದಗಿಸುತ್ತಿರುವ ಧರ್ಮಸ್ಥಳಕ್ಕೆ ಇದೀಗ ಕೆಲವರ ಷಡ್ಯಂತ್ರದಿಂದ ಅವಮಾನಿಸುವ ಕೆಲಸವಾಗುತ್ತಿದೆ. ಸನಾತನ ಹಿಂದೂ ಧರ್ಮದ ಸಂಸ್ಕ್ರತಿ ಹಾಳು ಮಾಡುವ ವ್ಯವಸ್ಥೆ ಸಂಚು ಇದಾಗಿದೆ. ಈ ಕಳಂಕ ಹೋಗಲಾಡಿಸುವ ನಿಟ್ಟಿನಲ್ಲಿ ರಾಜ್ಯದ ಜನ ಎಚ್ಚೆತ್ತುಕೊಂಡು ಹೋರಾಟ ಪ್ರಾರಂಭಿಸಿದೆ. ಕಾರಣ ಸದ್ಭಕ್ತರ ಅಪೇಕ್ಷೆಯಂತೆ ಹುಕ್ಕೇರಿಯಲ್ಲಿ ಎಲ್ಲ ಮಠಾಧೀಶರ ನೇತ್ರತ್ವದಲ್ಲಿ ಸಹಸ್ರಾರು ಜನರೊಂದಿಗೆ ಕ್ರಾಂತಿಕಾರಿ ಹೋರಾಟ ಮಾಡೋಣವೆಂದರು.
ಮಹಾವೀರ ಉದ್ಯೋಗ ಸಮೂಹ ಸಂಸ್ಥೆ ಅಧ್ಯಕ್ಷ ಮಹಾವೀರ ನಿಲಜಗಿ ಮತ್ತು ಜೈನ ಸಮಾಜ ತಾಲೂಕಾಧ್ಯಕ್ಷ ಬಾಹುಬಲಿ ನಾಗನೂರಿ ಮಾತನಾಡಿ ಪಟ್ಟಣದ ಅಡವಿಸಿದ್ದೇಶ್ವರ ಮಠದಿಂದ ಪ್ರಾರಂಭವಾಗುವ ಪ್ರತಿಭಟನಾ ಮೆರವಣಿಗೆ ಕೋರ್ಟ ವ್ರತ್ತದವರೆಗೆ ನಡೆಯಲಿದೆ. ಅಲ್ಲಿ ಸಭೆಯಾಗಿ ಮಾರ್ಪಡಲಿದೆ ಎಂದರು. ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸುವ ಪ್ರತಿಭಟನಾಕಾರರಿಗೆ ಶಿಕ್ಷಣ ಸಂಸ್ಥೆಗಳು ಮತ್ತು ಆ ಗ್ರಾಮದ ಪಿಕೆಪಿಎಸ್ ನವರು ವಾಹನ ಸೌಕರ್ಯ ಕಲ್ಪಿಸಲು ವಿನಂತಿಸಿದರು.
ವಿವಿಧ ಸಮಾಜದ ಮುಖಂಡರಾದ ಗುರು ಕುಲಕರ್ಣಿ, ಸತ್ತೆಪ್ಪಾ ನಾಯಿಕ, ಅರವಿಂದ ದೇಶಪಾಂಡೆ, ಸುಭಾಸ ನಾಯಿಕ, ಸುನೀಲ ಪರ್ವತರಾವ, ವಿ.ಎಚ್.ಪಿ ತಾಲೂಕಾಧ್ಯಕ್ಷ ಶಿವರಾಜ ನಾಯಿಕ, ರೈತ ಸಂಘಟನೆಯ ಪ್ರಭು ವಂಟಮೂರಿ, ಹಾಲಮತದ ಸಮಾಜ ತಾಲೂಕಾಧ್ಯಕ್ಷ ಜಯಪ್ರಕಾಶ ಕರಜಗಿ, ಭೀಮಸೇನ ಬಾಗಿ, ಸಿದ್ದಪ್ಪಾ ಏಗನ್ನವರ, ಶಂಕರ ಹೆಗಡೆ, ಶ್ರೀಕಾಂತ ಪವಾರ, ಎನ್.ಬಿ.ತೇರದಾಳ ಮತ್ತಿತರರು ಮಾತನಾಡಿ ಧರ್ಮಸ್ಥಳ ಪವಿತ್ರವಾದ ಸ್ಥಳವಾಗಿದೆ. ಜಾತ್ಯಾತೀತವಾಗಿ ಎಲ್ಲರೂ ನಡೆದುಕೊಳ್ಳುವ ಜಾಗ್ರತ ಸ್ಥಳಕ್ಕೆ ಕೆಟ್ಟ ಹೆಸರು ತರುವ ಹುನ್ನಾರ ಇದಾಗಿದ್ದು ಎಲ್ಲರೂ ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಶ್ರಮಿಸೋಣವೆಂದರು.

ವೀರಶೈವ ಲಿಂಗಾಯತ ತಾಲೂಕಾ ಘಟಕದ ಅಧ್ಯಕ್ಷ ಶೀತಲ ಬ್ಯಾಳಿ, ಅರ್ಬನ್ ಬ್ಯಾಂಕ್ ಅಧ್ಯಕ್ಷ ಚಂದ್ರಶೇಖರ ಪಾಟೀಲ, ಮಹಾವೀರ ಉದ್ಯೋಗ ಸಮೂಹ ಸಂಸ್ಥೆಯ ಸಂಜಯ ನಿಲಜಗಿ, ಪ್ರಜ್ವಲ ನಿಲಜಗಿ, ಉದ್ಯಮಿ ಆನಂದ ಲಕ್ಕುಂಡಿ, ಬಿ. ಬಿ ಕಂಠಿ. ಅಕ್ಕಪ್ಪಾ ಖತಗಲ್ಲಿ, ಅಶೋಕ ರಂಗೋಳಿ, ರಾಜು ಖೇಮಲಾಪೂರೆ, ಸಂಜು ಮಗದುಮ್ಮ, ಚನ್ನಪ್ಪ ಗಜಬರ, ಬಸವರಾಜ ಗಂಗನ್ನವರ, ಜಿನ್ನಪ್ಪಾ ಸಪ್ತಸಾಗರ, ರಾಮಣ್ಣಾ ಗೋಟೂರೆ, ಭೀಮಣ್ಣಾ ರಾಮಗೋನಟ್ಟಿ ಸೇರಿದಂತೆ ಅನೇಕರಿದ್ದರು.





