ನೇರ ನಡೆ-ನುಡಿಯ ವ್ಯಕ್ತಿತ್ವ ಹೊಂದಿದ್ದ ಮಾಜಿ ಸಚಿವ ದಿ.ಉಮೇಶ ಕತ್ತಿ ಅವರು ವಿಧಿವಶರಾಗಿ ಮೂರು ವರ್ಷ ಸಂದವು. ಆದರೆ ಇಂದಿಗೂ ಜನಮನದಲ್ಲಿ ಶಾಶ್ವತವಾಗಿ ಉಳಿದುಕೊಂಡಿದ್ದಾರೆ.
ವಿಧಾನಸಭೆಗೆ 8 ಬಾರಿ ಆಯ್ಕೆಯಾಗುವ ಮೂಲಕ ರಾಜ್ಯ ವಿಧಾನಸಭೆಯಲ್ಲಿ ದಾಖಲೆ ನಿರ್ಮಿಸಿದ್ದ ರಾಜಕೀಯ ಅಜಾತ ಶತ್ರು. ಉತ್ತರ ಕರ್ನಾಟಕದಲ್ಲಿ ಅಭಿವೃದ್ಧಿ ಕಾರ್ಯಗಳು ಆಗುತ್ತಿಲ್ಲವೆಂಬ ಕೂಗನ್ನು ಹಲವಾರು ಬಾರಿ ವ್ಯಕ್ತಪಡಿಸಿದವರು. ಇಂತಹ ಪ್ರಭಾವಿ ಜನನಾಯಕ ನಿಧನರಾಗಿದ್ದಾರೆಂಬುದನ್ನು ಒಪ್ಪಿಕೊಳ್ಳಲು ಜನತೆ ಸಿದ್ದರಿಲ್ಲ.
ಕೆರೆ ಕಟ್ಟೆಗಳಿಗೆ ನೀರು ಹರಿಸಿದ ಭಗೀರಥ: ಕ್ರಷಿ ಪ್ರೇಮಿಯಾಗಿದ್ದ ಇವರು ಪ್ರತಿ ರವಿವಾರ ಕ್ಷೇತ್ರದ 28 ಕೆರೆಗಳಿಗೆ ಭೇಟಿ ನೀಡಿ ತಮ್ಮೊಂದಿಗೆ ಇರುವ ತಾಲೂಕಾಡಳಿತದ ಎಲ್ಲ ಅಧಿಕಾರಿಗಳನ್ನು ಆತ್ಮೀಯವಾಗಿ ಜನಪರ ಕಾರ್ಯ ಕೈಗೊಳ್ಳಲು ಹುರದುಂಬಿಸುತ್ತಿದ್ದರು. ರವಿವಾರ ಬಿಡುವು ಇದ್ದರೂ ಹಳ್ಳಿಗಳಿಗೆ ಸಂಚರಿಸಿ ಜನರ ಸಮಸ್ಯೆ ಆಲಿಸುತ್ತಿದ್ದ ಕಾರ್ಯವನ್ನು ಅಧಿಕಾರಿಗಳು ಸದಾಕಾಲ ಸ್ಮರಿಸಿಕೊಳ್ಳುತ್ತಾರೆ.
ರಾಜ್ಯಕ್ಕೆ ಮಾದರಿ ಪ್ರವಾಸಿ ತಾಣ:
ನೂರಾರು ಕೋಟಿ ರೂ ವೆಚ್ಚದಲ್ಲಿ ತಾಲೂಕಿನ ಹಿಡಲ್ ಜಲಾಶಯ ಬಳಿ ರಾಜಾ ಲಖಮಗೌಡ ಉದ್ಯಾನಕಾಶಿ (ಬೃಂದಾವನ ಮಾದರಿ ಗಾರ್ಡನ್) ನಿರ್ಮಾಣಕ್ಕೆ ಚಾಲನೆ ನೀಡಿದ್ದ ಅವರು ಘಟಪ್ರಭಾ ನದಿಯಲ್ಲಿ ಬರುವ ನಡುಗಡ್ಡೆಗಳನ್ನು ವಿಹಾರ ಸ್ಥಳವನ್ನಾಗಿಸುವ ಮೂಲಕ ರಾಜ್ಯ ಮತ್ತು ನೆರೆ ರಾಜ್ಯಗಳ ಪ್ರವಾಸಿಗರು ಆಕರ್ಷಿತರಾಗುವಂತೆ ಸಂಕಲ್ಪಿಸಿದ್ದರು.

ಈ ಕನಸು ನನಸಾಗಲು ಇದೀಗ ಮಾಜಿ ಸಂಸದ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ, ಶಾಸಕ ನಿಖಿಲ ಉಮೇಶ ಕತ್ತಿ ಹಾಗೂ ಪೃಥ್ವಿ ಮತ್ತು ಪವನ ಕತ್ತಿ ಅವಳಿ ಸಹೋದರರು ಜವಾಬ್ದಾರಿ ಹೊತ್ತ್ತು ನಿಭಾಯಿಸುತ್ತಿದ್ದಾರೆ.
ರೈತರಿಗೆ ನೀರಾವರಿ ಸೌಲಭ್ಯ: ಕ್ಷೇತ್ರದಲ್ಲಿ ನೀರಾವರಿ ಹೆಚ್ಚಿಸಲು 30ಕ್ಕೂ ಹೆಚ್ಚು ಕೆರೆ ನಿರ್ಮಿಸಿ ಅವುಗಳಿಗೆ ಹಿರಣ್ಯಕೇಶಿ ನದಿಯಿಂದ ನೀರು ತುಂಬಿಸುವ ಕಾರ್ಯ ಕೈಗೊಂಡಿದ್ದಾರೆ. ಬೇಸಿಗೆಯಲ್ಲಿ ಹಿರಣ್ಯಕೇಶಿ ನದಿ ಬತ್ತದಂತೆ ಘಟಪ್ರಭಾ ನದಿಯ ಹಿನ್ನೀರು ಬಳಸಲು ತಾಲೂಕಿನ ಸುಲ್ತಾನಪೂರ ಬಳಿ ಪಂಪಸೆಟ್ ಅಳವಡಿಸಿ ಪೈಪಲೈನ್ ಮೂಲಕ ನದಿಯ ಬ್ಯಾರೇಜುಗಳಿಗೆ ನೀರು ತುಂಬಿಸಿ ಸರ್ವ ಋತು ನೀರಾವರಿ ಆಗಬೇಕೆಂದು ಕ್ರಿಯಾ ಯೋಜನೆ ಪ್ರಸ್ತಾಪಿಸಿದ್ದರು. ಇದೀಗ ಅವರ ಪುತ್ರ ಶಾಸಕ ನಿಖಿಲ ಕತ್ತಿ ಈ ಕಾಮಗಾರಿ ಪೂರ್ಣಗೊಳಿಸುತ್ತಿದ್ದಾರೆ.
ತೋಟಪಟ್ಟಿ ನಿವಾಸಿಗಳಿಗೆ ರಸ್ತೆ ನಿರ್ಮಿಸಿದವರು: ಕೊರೊನಾ ಸಂದರ್ಭದಲ್ಲಿ ಬಡ ವರ್ಗಕ್ಕೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ತೋಟಪಟ್ಟಿಗಳಿಗೆ ನರೇಗಾ ಯೋಜನೆಯಡಿ ರಸ್ತೆ ನಿರ್ಮಿಸಿದ ಇವರ ಕಾರ್ಯ ರಾಜ್ಯಕ್ಕೆ ಮೊದಲು ಮತ್ತು ಮಾದರಿಯಾಗಿದೆ.

ವ್ಯಕ್ತಿಯಲ್ಲ ಶಕ್ತಿ: ನಮ್ಮಣ್ಣನ ನಿಧನಾನಂತರ ನಮಗೆ ಮತ್ತು ಜನರಿಗೆ ವ್ಯಕ್ತಿಯಲ್ಲ ಶಕ್ತಿ ಆಗಿದ್ದ ಎಂಬುದು ಗೊತ್ತಾಗಿದೆ. ಅವರಿಲ್ಲವೆಂಬ ಕೊರಗು ಇದ್ದರೂ, ಅವರನ್ನು ನಿತ್ಯ ಸ್ಮರಿಸುವ ಕ್ಷೇತ್ರದ ಜನರ ಆಶಯ ಕಂಡು ಮನ ಮಿಡಿಯುತ್ತದೆ. ಅವರು ಕೈಗೊಂಡ ಜನಪರ ಕಾರ್ಯಗಳು ಶಾಶ್ವತವಾಗಿ ಜನಮನದಲ್ಲಿವೆ. ರಮೇಶ ಕತ್ತಿ ಮಾಜಿ ಸಂಸದರು.
ಸ್ನೇಹಪರ ವ್ಯಕ್ತಿತ್ವ: ಇದೀಗ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದ ಆಡಳಿತ ಇದ್ದರೂ ಕ್ಷೇತ್ರದ ಜನಪರ ಕಾರ್ಯಗಳಿಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಸೇರಿದಂತೆ ಎಲ್ಲ ಮಂತ್ರಿಗಳು ಉಮೇಶ ನಮ್ಮ ಆತ್ಮೀಯ ಸ್ನೇಹಿತ. ಆ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳಿಗೆ ಯಾವಾಗಲೂ ಸ್ಪಂದಿಸುತ್ತೇವೆ ಎಂದು 850 ಕೋಟಿ ರೂ ಹೆಚ್ಚು ಮೊತ್ತದ ಅನುದಾನ ಮಂಜೂರಾತಿ ನೀಡಿದ್ದೇ ನಮ್ಮ ತಂದೆಯ ಸ್ನೇಹಪರ ವ್ಯಕ್ತಿತ್ವಕ್ಕೆ ಸಾಕ್ಷಿ. ನಿಖಿಲ ಕತ್ತಿ ಶಾಸಕರು.






