ಹುಕ್ಕೇರಿ : ಹುಕ್ಕೇರಿ ಗ್ರಾಮದೇವತೆ ಜಾತ್ರಾ ಮಹೋತ್ಸವ ಶಾಂತಿಯುತವಾಗಿ ನೆರವೇರಿಸಿದ್ದಕ್ಕೆ ಜಾತ್ರಾ ಸಮಿತಿ ಮತ್ತು ಮುಖಂಡರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ ಎಂದು ಶಾಸಕ ನಿಖಿಲ ಕತ್ತಿ ಹೇಳಿದರು.
ಶನಿವಾರದಂದು ಜಾತ್ರಾ ಮಹೋತ್ಸವದ ಸಂಪನ್ನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಬಜೆಟ್ ಅಧಿವೇಶನದ ನಿಮಿತ್ಯ ನಾನು 5 ದಿನಗಳ ಜಾತ್ರಾ ಉತ್ಸವದ ಕೊನೆ ದಿನದಂದು ಪಾಲ್ಗೊಂಡು ದೇವಿ ಆಶೀರ್ವಾದ ಪಡೆದಿರುವೆನು. ಜಾತ್ರೆ ವ್ಯವಸ್ಥಿತವಾಗಿ ಜರುಗಲು ಪೌರಾಡಳಿತ ಮತ್ತು ಪೋಲಿಸ್ ಇಲಾಖೆಗೆ ಎಲ್ಲ ಸೌಲಭ್ಯ ಒದಗಿಸಲು ತಿಳಿಸಿದ್ದೆನು. ಅದನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟ ಅಧಿಕಾರಿಗಳ ಕರ್ತವ್ಯಕ್ಕೆ ಸಂತಸವಾಗಿದೆ ಎಂದರು.
ಜಾತ್ರೆ ಸಂಪನ್ನಗೊ0ಡ ಬಳಿಕ ಪಟ್ಟಣದ ಸ್ವಚ್ಚತೆಗೆ ಪೌರಾಡಳಿತ ಕ್ರಮ ಕೈಗೊಳ್ಳಬೇಕು. ಬೇಸಿಗೆ ಸಮಯ ಆಗಿರುವುದರಿಂದ ಪಟ್ಟಣವಾಸಿಗಳಿಗೆ ಶುದ್ಧ ಕುಡಿಯುವ ನೀರನ್ನು ಸರಿಯಾಗಿ ಒದಗಿಸಬೇಕು. ಅಧಿಕಾರಿಗಳಿಗೆ ಸಾರ್ವಜನಿಕರು ಸಹಕರಿಸುವಂತೆ ಸೂಚಿಸಿದರು.
ಜಾತ್ರಾ ಮಹೋತ್ಸವ ಸಮಿತಿಯ ಭೀಮಾನಂದ ಮುದಕನ್ನವರ, ಚಿದಾನಂದ ಬಸ್ತವಾಡೆ, ವಿದ್ಯುತ್ ಸಹಕಾರಿ ಸಂಘದ ನಿರ್ದೇಶಕ ಶಿವಾನಂದ ಮುಡಸಿ, ಮುಖಂಡರಾದ ಎ.ಕೆ.ಪಾಟೀಲ, ಚನ್ನಪ್ಪಾ ಗಜಬರ, ಸುರೇಶ ಜಿನರಾಳಿ, ರಾಜು ನಾಯಿಕ, ರಾಜು ಮುನ್ನೋಳಿ, ಬಸವರಾಜ ಗಂಗನ್ನವರ, ರವಿ ನಾಯಿಕ, ಸಿದ್ದಪ್ಪಾ ಹಳಿಜೋಳ, ಮೀಯಾಸಾಬ ಮೊಕಾಶಿ ಇತರರಿದ್ದರು.





