ಜಾತೀಯ ಸಾಮರಸ್ಯಕ್ಕೆ ಜಾತ್ರಾ ಮಹೋತ್ಸವ ಸಹಕಾರಿ : ಪವನ ಕತ್ತಿ

ತಾಲೂಕಿನ ಶಿರಹಟ್ಟಿ ಬಿ.ಕೆ ಗ್ರಾಮದಲ್ಲಿ ನಡೆದ ಬಸವೇಶ್ವರ ದೇವರ ಜಾತ್ರಾ ಮಹೋತ್ಸವದಲ್ಲಿ ಪವನ ಕತ್ತಿ ಅವರನ್ನು ಸನ್ಮಾನಿಸಲಾಯಿತು.ಅಣ್ಣಪ್ಪಾ ಬ್ಯಾಳಿ, ಶೀತಲ ಬ್ಯಾಳಿ, ಆನಂದ ದಪ್ಪಾದೂಳಿ, ಸಂಜೀವ ಹತ್ತರವಾಟ, ಶಿವಾನಂದ ಢಂಗ ಇತರರಿದ್ದರು.

ಹುಕ್ಕೇರಿ : ಜಾತೀಯ ಸಾಮರಸ್ಯಕ್ಕೆ ಜಾತ್ರಾ ಮಹೋತ್ಸವ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಸಹಕಾರಿ ಆಗಿವೆ.ಅನಾದಿ ಕಾಲದಿಂದ ನಮ್ಮ ಗುರು ಹಿರಿಯರು ಬೆಳೆಸಿಕೊಂಡ ಪರಂಪರೆ ನಾವು ಅರಿತುಕೊಳ್ಳಬೇಕೆಂದು ಬೆಲ್ಲದ ಬಾಗೇವಾಡಿ ಅರ್ಬನ್ ಬ್ಯಾಂಕ್ ಅಧ್ಯಕ್ಷ ಪವನ ಕತ್ತಿ ಹೇಳಿದರು.

ಸೋಮವಾರದಂದು ತಾಲೂಕಿನ ಶಿರಹಟ್ಟಿ ಬಿ.ಕೆ ಗ್ರಾಮದಲ್ಲಿ ನಡೆದ ಬಸವೇಶ್ವರ ದೇವರ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು.ಮಕ್ಕಳಲ್ಲಿ ಉತ್ತಮ ಆಚಾರ ವಿಚಾರಗಳ ಸಂಸ್ಕಾರ ಬೆಳೆಯಲು ಇವು ಸಹಕಾರಿಯಾಗಿವೆ.ಈ ನೆಪದಲ್ಲಿ ನಡೆಯುವ ಕುಸ್ತಿ, ಸೈಕಲ್ ಮತ್ತು ಓಟದಂತಹ ಸ್ಪರ್ಧೆಗಳಿಂದ ಯುವ ಜನಾಂಗಕ್ಕೆ ಆರೋಗ್ಯ ಪಾಠ ಹೇಳಿಕೊಟ್ಟಂತಾಗುತ್ತದೆ.ರೈತರ ಕೃಷಿಗೆ ಸಹಾಯವಾಗುವ ಜಾನುವಾರುಗಳ ಪ್ರದರ್ಶನ ಮೊದಲಾದವು ನಮ್ಮ ದೇಶಿ ಸಂಸ್ಕೃತಿಗೆ ನಿದರ್ಶನವಾಗುತ್ತವೆ ಎಂದರು.

ಇದೇ ಸಂದರ್ಭದಲ್ಲಿ ಜಾತ್ರಾ ಮಹೋತ್ಸವ ಸಮಿತಿಯವರು ಪವನ ಕತ್ತಿ ಅವರನ್ನು ಸತ್ಕರಿಸಿದರು.

ಪಿಕಾರ್ಡ ಬ್ಯಾಂಕ್ ನಿರ್ದೇಶಕ ಶೀತಲ ಬ್ಯಾಳಿ, ಅರಿಹಂತ ಸೌಹಾರ್ದ ಸಹಕಾರಿ ನಿರ್ದೇಶಕ ರಾಮಣ್ಣಾ ಗೋಟುರೆ, ಮುಖಂಡರಾದ ಅಣ್ಣಪ್ಪಾ ಬ್ಯಾಳಿ, ಆನಂದ ದಪ್ಪಾದೂಳಿ, ಉದಯ ಬ್ಯಾಳಿ, ಶಿವಾನಂದ ಢಂಗ, ಮುರಗಯ್ಯಾ ಹಿರೇಮಠ, ಸಂಜೀವ ಹತ್ತರವಾಟ, ಸಿದ್ರಾಮ ಖೋತ, ರಾಜು ಹಂಚಿನಾಳ, ಕಲ್ಲಪ್ಪಾ ನಾಯಿಕ ಮತ್ತಿತರರಿದ್ದರು.

Leave a Reply

Your email address will not be published. Required fields are marked *

error: Content is protected !!