ಬೆಳಗಾವಿ ಜಿಲ್ಲಾ ಲಿಂಗಾಯತ ಸಮಾಜದ ಮುಖಂಡರು ನಿಡಸೋಸಿ ದುರದುಂಡೇಶ್ವರ ಮಠದಲ್ಲಿ ಮಠದ ಉತ್ತರಾಧಿಕಾರಿ ನಿಜಲಿಂಗೇಶ್ವರ ಶ್ರೀಗಳಿಗೆ ಹಣ್ಣಿನ ರಸ ಕುಡಿಸಿ ಉಪವಾಸ ಸತ್ಯಾಗ್ರಹ ಬಿಡಿಸಿದರು.
ಹುಕ್ಕೇರಿ : ಮೇ 21 ಕ್ಕೆ ರಾಜ್ಯಸಭಾ ಮಾಜಿ ಸದಸ್ಯರು, ಕೆ.ಎಲ್.ಇ ಕಾರ್ಯಾಧ್ಯಕ್ಷರಾದ ಪ್ರಭಾಕರ ಅವರ ನೇತ್ರತ್ವದಲ್ಲಿ ಗಡಿಭಾಗದ ಭಕ್ತರ ಆರಾಧ್ಯ ಮಠವಾಗಿರುವ ನಿಡಸೋಸಿಯ ದುರದುಂಡೇಶ್ವರ ಮಠದ ಗದ್ದುಗೆ ಗುದ್ದಾಟದ ಸಮಸ್ಯೆ ಪರಿಹರಿಸಲು ಬೆಳಗಾವಿ ಜಿಲ್ಲಾ ಲಿಂಗಾಯತ ಮುಖಂಡರು ನಿರ್ಣಯಿಸಿದರು.
ಇತ್ತೀಚಿನ ದಿನಗಳಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿದ್ದ ನಿಡಸೋಸಿ ಮಠದ ಉತ್ತರಾಧಿಕಾರಿಯಾದ ನಿಜಲಿಂಗೇಶ್ವರ ಶ್ರೀಗಳಿಗೆ ಮಠದ ಪೀಠಾಧಿಪತಿ ಜಗದ್ಗುರು ಡಾ.ಪಂಚಮ ಶಿವಲಿಂಗೇಶ್ವರ ಶ್ರೀಗಳು ಅಧಿಕಾರ ನೀಡುತ್ತಿಲ್ಲವೆಂದು ಉಪವಾಸ ಸತ್ಯಾಗ್ರಹ ಪ್ರಾರಂಭಿಸಿದ್ದರು. ಇದನ್ನು ಅರಿತ ಲಿಂಗಾಯತ ಸಮಾಜದ ಮುಖಂಡರು ಹಲವಾರು ಬಾರಿ ವಿವಾದ ಪರಿಹರಿಸಲು ಪ್ರಯತ್ನಿಸಿದ್ದರು. ಆದರೆ ಈ ತಿಕ್ಕಾಟಕ್ಕೆ ಪರಿಹಾರ ದೊರಕಲಿಲ್ಲ.
ಇಂದು ಬೆಳಗಾವಿಯಲ್ಲಿ ಪ್ರಭಾಕರ ಕೋರೆ ನೇತೃತ್ವದಲ್ಲಿ ಸಭೆ ಸೇರಿದ ಲಿಂಗಾಯತ ಸಮಾಜದ ಮುಖಂಡರು ಇರ್ವರು ಶ್ರೀಗಳ ಜೊತೆಗೆ ಹಲವಾರು ಬಾರಿ ಮಾತನಾಡಿದರು.ಆದರೆ ಇದಕ್ಕೆ ಯಾವುದೇ ಪರಿಹಾರ ಕಾಣದ ಕಾರಣ.ಮುಖಂಡರು ನಿಡಸೋಸಿ ಮಠಕ್ಕೆ ತೆರಳಿ ಉತ್ತರಾಧಿಕಾರಿ ನಿಜಲಿಂಗೇಶ್ವರ ಶ್ರೀಗಳ ಜೊತೆಗೆ ಚರ್ಚಿಸಿ ತಾತ್ಕಾಲಿಕವಾಗಿ ಉಪವಾಸ ಸತ್ಯಾಗ್ರಹ ಬಿಡಲು ಮನವೊಲಿಸಿದರು. ನಂತರ ಶ್ರೀಗಳಿಗೆ ಹಣ್ಣಿನ ರಸ ಕುಡಿಸಿ ಉಪವಾಸ ಸತ್ಯಾಗ್ರಹ ಬಿಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಲಿಂಗಾಯತ ಮುಖಂಡರು ಈ ಸಮಸ್ಯೆ ನಮ್ಮ ಲಿಂಗಾಯತ ಸಮಾಜದ ಮೇಲೆ ಪರಿಣಾಮ ಬೀರುತ್ತಿದೆ.ಕಾರಣ ಮೇ 21 ರಂದು ಇರ್ವರು ಶ್ರೀಗಳ ಜೊತೆಗೆ ಚರ್ಚಿಸಿ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುತ್ತೇವೆ ಎಂದರು.
ಮಾಜಿ ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ, ಮಾಜಿ ಸಂಸದ ರಮೇಶ ಕತ್ತಿ, ಮಾಜಿ ಸಚಿವ ಎ.ಬಿ.ಪಾಟೀಲ, ಶಾಸಕ ಗಣೇಶ ಹುಕ್ಕೇರಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ಸಂಗಮ ಶುಗರ್ಸ್ ಅಧ್ಯಕ್ಷ ರಾಜೇಂದ್ರ ಪಾಟೀಲ ಮತ್ತಿತರರಿದ್ದರು.